ಹಾನಗಲ್ಲ: ಪಟ್ಟಣದ ಮೂಲಕ ಸಾಗಿರುವ ತಡಸ- ಶಿವಮೊಗ್ಗ ರಾಜ್ಯ ಹೆದ್ದಾರಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಪ್ರಾಣಾಪಾಯ ವಲಯವಾಗಿ ಮಾರ್ಪಟ್ಟಿದೆ.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಕುಮಾರೇಶ್ವರ ವಿರಕ್ತಮಠದವರೆಗಿನ ರಸ್ತೆಯಲ್ಲಿ ಪ್ರತಿ ದಿನ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಈ ರಸ್ತೆಯು ತಡಸದಿಂದ- ಹಾನಗಲ್ಲವರೆಗೆ, ಹಾನಗಲ್ಲಿನಿಂದ- ಶಿವಮೊಗ್ಗದವರೆಗೆ ಕೆಶಿಪ್ ಸಂಸ್ಥೆಯಿಂದ ಮೇಲ್ದರ್ಜೆಗೇರಿದ ರಸ್ತೆಯಾಗಿ ಪರಿವರ್ತನೆಗೊಂಡು ಮರು ನಿರ್ವಣಗೊಂಡಿದೆ. ಆದರೆ, ಹಾನಗಲ್ಲ ಪಟ್ಟಣದ ಒಳಗಿನ ರಸ್ತೆಯನ್ನು ಅಗಲೀಕರಣಗೊಳಿಸಲು ಮನೆಗಳ ಮಾಲೀಕರು ಒಪ್ಪಿಗೆ ನೀಡುತ್ತಿಲ್ಲ. ಈ ಮನೆಗಳ ಮಾಲೀಕರಿಗೆ ನೀಡುವಷ್ಟು ಪರಿಹಾರದ ಹಣವನ್ನು ಈ ಯೋಜನೆಯಲ್ಲಿ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂಬಂಥ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ಕೆಶಿಪ್ ಅಧಿಕಾರಿಗಳು ಕಾರಣ ನೀಡಿದ್ದಾರೆ.
ಸಮಸ್ಯೆಗೆ ಕಾರಣವೇನು?: ಎರಡು ಬಾರಿ ಡಾಂಬರೀಕರಣಗೊಂಡಿದ್ದರೂ ಈ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ಹಾಕಲಾದ ಡಾಂಬರ್ ಬಿಸಿಲು- ಮಳೆಗೆ ಹಿಗ್ಗಿ- ಕುಗ್ಗಿ ರಸ್ತೆ ಮಧ್ಯದಲ್ಲಿ ಜರಿದು ನಿಂತು, ಉಬ್ಬಿಕೊಂಡು ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ. ಸುಮಾರು ಒಂದೂವರೆ ಕಿ.ಮೀ. ನಷ್ಟಿರುವ ಈ ರಸ್ತೆ ಹಲವು ಕಡೆಗಳಲ್ಲಿ ಬಿರಿದುಕೊಂಡಿದೆ. ಬಹಳಷ್ಟು ಕಡೆಗಳಲ್ಲಿ ತಗ್ಗುಗಳೂ ಬಿದ್ದಿವೆ. ವಾಹನ ಸವಾರರು ಗುಂಡಿಗಳನ್ನು ಹಾಗೂ ಡಾಂಬರಿನ ಗುಡ್ಡೆಗಳನ್ನು ತಪ್ಪಿಸಿ ವಾಹನ ಚಲಾಯಿಸಿ ಸುಸ್ತಾಗುತ್ತಿದ್ದಾರೆ. ಇದನ್ನು ಪ್ರತಿದಿನವೂ ಅಧಿಕಾರಿಗಳೂ ಕಂಡೂ ಕಾಣದಂತೆ ಮುಂದೆ ಸಾಗುತ್ತಿದ್ದಾರೆ. ಕಳೆದ ವರ್ಷ ಈ ರಸ್ತೆಗೆ ಚೌಕಾಕಾರದ ಡಾಂಬರಿನ ತೇಪೆ ಹಾಕುವ ಕೆಲಸವೂ ನಡೆದಿದೆ. ಈ ಕೆಲಸಕ್ಕೆ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗಿತ್ತು.
ಶಿವಮೊಗ್ಗಕ್ಕೆ ಸಮೀಪ ಮಾರ್ಗ: ಹುಬ್ಬಳ್ಳಿಯಿಂದ ಹಾವೇರಿ- ಹರಿಹರ ಮಾರ್ಗದ ಬದಲು ತಡಸ- ಹಾನಗಲ್ಲ- ಶಿಕಾರಿಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಿದರೆ 40 ಕಿ.ಮೀ. ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳೂ ಸೇರಿ ಸರಕು ವಾಹನಗಳು ಹಾನಗಲ್ಲ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಹೀಗಾಗಿ, ಪ್ರತಿ ವರ್ಷವೂ ಪಟ್ಟಣದಲ್ಲಿ ಈ ರಸ್ತೆ ಕುಸಿಯುತ್ತಿದ್ದು, ಇದನ್ನು ಸಂಪೂರ್ಣವಾಗಿ ಕಿತ್ತು ಅಗಲೀಕರಣಗೊಳಿಸಿ, ಭೂಮಿಯನ್ನು ಗಟ್ಟಿಗೊಳಿಸಿ ಗುಣಮಟ್ಟದ ರಸ್ತೆ ನಿರ್ವಿುಸುವ ಅಗತ್ಯವಿದೆ.
ಇದು ಯಾರಿಗೆ ಸಂಬಂಧಿಸಿದ ರಸ್ತೆ?: ತಡಸದಿಂದ ಶಿವಮೊಗ್ಗದವರೆಗೆ ರಸ್ತೆ ನಿರ್ವಿುಸಲು ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ಕೆಶಿಪ್ಗೆ ಎರಡು ಭಾಗವಾಗಿ ವಿಭಜಿಸಿ ಹಸ್ತಾಂತರಿಸಿದೆ. ತಡಸದಿಂದ ಹಾನಗಲ್ಲವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ತನ್ನ ಸ್ವಾಧೀನಕ್ಕೆ ಮರಳಿ ಪಡೆದಿದೆ. ಆದರೆ, ಹಾನಗಲ್ಲಿನಿಂದ ಶಿವಮೊಗ್ಗಕ್ಕೆ ತೆರಳುವ ರಸ್ತೆ ಹಾನಗಲ್ಲ ಪಟ್ಟಣದ ಮಧ್ಯದಲ್ಲಿ ಕಾಮಗಾರಿ ಕೈಗೊಳ್ಳದಿರುವುದರಿಂದ ಕೆಶಿಪ್ನಿಂದ ಮರಳಿ ಪಡೆಯಲು ಒಪ್ಪುತ್ತಿಲ್ಲ. ಈ ಮಧ್ಯೆ ಪಟ್ಟಣದೊಳಗಿನ ಒಂದೂವರೆ ಕಿ.ಮೀ. ರಸ್ತೆ ಬಿಟ್ಟು ಉಳಿದಿದ್ದನ್ನು ಮರಳಿ ಪಡೆಯುವಂತೆ ಕೆಶಿಪ್ ಹಾನಗಲ್ಲಿನ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಹೀಗಾಗಿ, ಸ್ಥಳೀಯ ಪಿಡಬ್ಲ್ಯುಡಿ ಈ ರಸ್ತೆಯ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಶಿಪ್ ಸಂಸ್ಥೆಯ ಉಪವಿಭಾಗದ ಕಚೇರಿ ಶಿಕಾರಿಪುರದಲ್ಲಿರುವುದರಿಂದ ಹಾನಗಲ್ಲಿನಲ್ಲಿ ಈ ಸಮಸ್ಯೆ ಹೇಳಿಕೊಳ್ಳಲು ಕೆಶಿಪ್ ಅಧಿಕಾರಿಗಳೂ ಕೈಗೆ ಸಿಗುತ್ತಿಲ್ಲ. ಕೆಶಿಪ್- ಪಿಡಬ್ಲ್ಯುಡಿ ಈ ಎರಡೂ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಸಾರ್ವಜನಿಕರು, ಪ್ರಯಾಣಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಹಾನಗಲ್ಲ ಮೂಲಕ ಸಾಗಿರುವ ಶಿವಮೊಗ್ಗ ರಸ್ತೆಯನ್ನು ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ಕೆಶಿಪ್ಗೆ ಹಸ್ತಾಂತರಿಸಲಾಗಿದೆ. ಆದರೆ, ಕಾಮಗಾರಿ ಪಟ್ಟಣದ ಮಧ್ಯದಲ್ಲಿ ಪೂರ್ಣಗೊಳ್ಳದ್ದರಿಂದ ನಮ್ಮ ಇಲಾಖೆಗೆ ರಸ್ತೆಯನ್ನು ಮರಳಿ ಪಡೆದಿಲ್ಲ. ನಮ್ಮ ಇಲಾಖೆಯಿಂದ ಈ ರಸ್ತೆ ದುರಸ್ತಿಗೆ ಅನುದಾನವೂ ಬರುತ್ತಿಲ್ಲ. ಕೆಶಿಪ್ನವರು ರಸ್ತೆಯನ್ನು ಪೂರ್ಣಗೊಳಿಸಿ ನಮ್ಮ ಇಲಾಖೆಗೆ ಮರಳಿ ಹಸ್ತಾಂತರಿಸುವವರೆಗೆ ಈ ರಸ್ತೆಯ ನಿರ್ವಹಣೆ ಹೊಣೆ ಅವರದ್ದೇ.
| ಎಂ.ಬಿ. ಬಿರಾದಾರ, ಎಇಇ, ಪಿಡಬ್ಲ್ಯುಡಿ ಹಾನಗಲ್ಲ
ಪ್ರತಿದಿನ ಹಾನಗಲ್ಲ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಗೆ ಹಾಕಿದ್ದ ಡಾಂಬರು ಜರಿದು ಹೋಗಿ ರಸ್ತೆ ಮಧ್ಯದಲ್ಲಿ ಗುಡ್ಡೆಗಳಾಗಿ ನಿಂತಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯವರು ಈ ಗುಡ್ಡೆಗಳನ್ನು ತೆಗೆದು ಹಾಕಿ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಬೇಕು.
| ಮೆಹಬೂಬಸಾಬ್ ನಾಶಿಪುಡಿ, ವಾಹನ ಸವಾರ ಹಾನಗಲ್ಲ