ವಿಜಯವಾಣಿ ಸುದ್ದಿಜಾಲ ಕಾಮಸಮುದ್ರ
ಹೋಬಳಿಯಾದ್ಯಂತ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಹೋಬಳಿಯ ತಮಿಳುನಾಡು ಗಡಿಗೆ ಅಂಟಿಕೊಂಡಿರುವ ಮುಷ್ಟರಹಳ್ಳಿ, ಬತ್ತಲಾವೂರು, ಗುಂಡಾರ್ಲಹಳ್ಳಿ, ತಳೂರು, ಪೋಲೇನಹಳ್ಳಿ, ಬತ್ತಲಹಳ್ಳಿ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆದಿದ್ದ ಟೊಮ್ಯಾಟೋ, ಗಡ್ಡೆ ಕೋಸು, ವೀಳೆದೆಲೆ ಮತ್ತು ಸೇವಂತಿ ಹೂವಿನ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಬತ್ತಲಾವೂರು, ಮುಷ್ಟರಹಳ್ಳಿ ಸೇರಿ 40ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಾಶವಾಗಿವೆ.
ಟೊಮ್ಯಾಟೊಗೆ ಬೆಲೆ ಹೆಚ್ಚಾಗಿದ್ದು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದೆ. ಆದರೆ ಇದ್ದಕ್ಕಿದ್ದಂತೆ ಬಂದ ಆಲಿಕಲ್ಲು ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಕೂಡಲೆ ಬೆಳೆ ಹಾನಿ ಅನುಭವಿಸಿರುವ ರೈತರ ನೆರವಿಗೆ ಧಾವಿಸಬೇಕು.
ಮುನಿಯಪ್ಪ, ರೈತ, ಮುಷ್ಟರಹಳ್ಳಿ