ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ದೀರ್ಘಕಾಲೀನ ಅನಾರೋಗ್ಯ ಹೊಂದಿರುವವರಿಗೆ ಉದ್ದೇಶಿತ ಚಿಕಿತ್ಸೆ ನೀಡಲು ಹೆಚ್ಚು ಗಮನಹರಿಸುವಂತೆ ವೈದ್ಯರಿಗೆ ನಿರ್ದೇಶಿಸಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಮಾರ್ಗಸೂಚಿ ಕುರಿತು ರಾಜ್ಯ ವೈದ್ಯಕೀಯ ಶಿಷ್ಠಾಚಾರ ಸಮಿತಿಯ ಅಭಿಪ್ರಾಯ ಕೇಳಲಾಗಿದೆ.
ರಾಜ್ಯದಲ್ಲಿ ಗುರುವಾರ ಕೋವಿಡ್ ಸೋಂಕಿಗೆ ನಾಲ್ವರು ಮೃತಪಟ್ಟಿದ್ದು, ಡಿ.15ರಿಂದ ಈವರೆಗೂ 20 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಹತ್ತು ಸಾವುಗಳ ವಿಶ್ಲೇಷಣಾ ವರದಿ ಬಂದಿದ್ದು, ಇವರಲ್ಲಿ ಒಬ್ಬರು ಮಾತ್ರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ 9 ಮಂದಿ ಸಾವಿಗೆ ದೀರ್ಘಕಾಲೀನ ಅನಾರೋಗ್ಯ ಕಾರಣ ಎಂದು ರಾಜ್ಯ ಡೆತ್ ಆಡಿಟ್ ಕಮಿತಿ ವರದಿಯಲ್ಲಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ದೀರ್ಘಕಾಲೀನ ಅನಾರೋಗ್ಯ ಹೊಂದಿರುವ ರೋಗಿಗಳಲ್ಲಿ ಕೋವಿಡ್ ಪತ್ತೆಯಾದ ಆರಂಭಿಕ ಹಾಗೂ ನಂತರದಲ್ಲಿ ಸರಿಯಾದ ಪರೀಕ್ಷೆಯ ಅಗತ್ಯವಿದ್ದು, ಬಳಿಕ ಅವರಿಗೆ ಉದ್ದೇಶಿತ ಚಿಕಿತ್ಸೆ ನೀಡುವತ್ತ ಹೆಚ್ಚು ಗಮನ ಹರಿಸುವಂತೆ ವೈದ್ಯರಿಗೆ ಶೀಘ್ರದಲ್ಲೇ ನಿರ್ದೇಶನ ನೀಡಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ರೂಪಾಂತರಿ ತಳಿ ಜೆಎನ್1 ಸೋಂಕಿತರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವು ಸಾಧ್ಯತೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅನೇಕ ತಜ್ಞರು ಹೇಳಿದ್ದರೂ, ಹಿರಿಯ ನಾಗರಿಕರು ಹಾಗೂ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವವರು ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.