ಹೊಸನಗರ: ತಾಲೂಕಿನ ಮಾವಿನಹೊಳೆ ಬಳಿ ಬುಧವಾರ ಕಂಟೇನರ್ ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗರ್ತಿಕರೆಯ ಸುಮಂತ್ (21) ಮೃತ ದುರ್ದೈವಿ. ಹೊಸನಗರದಿಂದ ಸಾಗರ ಕಡೆ ಹೋಗುತ್ತಿದ್ದ ಕಂಟೇನರ್ ಲಾರಿ, ಸಾಗರ ಕಡೆಯಿಂದ ಹೊಸನಗರ ಕಡೆ ಬರುತ್ತಿದ್ದ ಬೈಕ್ ಅಪಘಾತವಾಗಿದೆ. ಚಿಕ್ಕಮಣತಿ ಗ್ರಾಮದ ಮುತ್ತೂರಿನ ತನ್ನ ಅಕ್ಕನ ಮನೆಗೆ ಬೈಕ್ನಲ್ಲಿ ಸುಮಂತ್ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕೆಲ ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡ ಸುಮಂತ್ ಅಮ್ಮನ ಪಾಲಿಗೆ ಆಸರೆಯಾಗಿದ್ದ. ಇದ್ದ ಒಬ್ಬ ಮಗನನ್ನು ಕಳೆದುಕೊಂಡು ತಾಯಿಗೆ ಆಸರೆ ಇಲ್ಲದಂತಾಗಿದೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.