ಮೈಸೂರು: ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಹತ್ಯೆ ಪ್ರಕರಣವು ಧರ್ಮ ಹಾಗೂ ರಾಜಕೀಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ತಿ. ನರಸೀಪುರದಲ್ಲಿ ವೇಣುಗೋಪಾಲ್ ಕುಟುಂಬಸ್ಥರನ್ನು ಭೇಟಿ ಮಾಡಿ ಪರಿಹಾರದ ಚೆಕ್ ನೀಡಿದ ಬಳಿಕ ಮಾತನಾಡಿದ ಮಹದೇವಪ್ಪ ಬಿಜೆಪಿಯವರು ವಿನಾಕಾರಣ ನನ್ನ ಮಗ ಸುನೀಲ್ ಬೋಸ್ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಆರೊಪಿಸಿದ್ದಾರೆ.
ವೇಣುಗೋಪಾಲ್ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟಿಕೊಂಡು ಹನುಮ ಜಯಂತಿ ಆಚರಣೆಯನ್ನು ಚೆನ್ನಾಗಿಯೇ ಮಾಡಿದ್ದಾರೆ. ಅದಕ್ಕೆ ಯಾವ ತಕರಾರು ಇಲ್ಲ. ಅವರ ಸಂಘಟನೆಯ ಸದಸ್ಯರೇ ನಡುವೆಯೇ ಬೈಕ್ ನಿಲ್ಲಿಸುವ ಹಾಗೂ ಫೋಟೋ ಹಾಕುವ ವಿಚಾರಕ್ಕೆ ಗಲಾಟೆಯಾಗಿ ಹತ್ಯೆಯಾಗಿದೆ.
ಇದನ್ನೂ ಓದಿ: VIDEO| ರೈಲಿನಲ್ಲಿ ಚಪ್ಪಲಿ ಹಿಡಿದು ಬಡಿದಾಡಿಕೊಂಡ ಮಹಿಳೆಯರು
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿಂದುತ್ವದ ಕಾರ್ಯಸೂಚಿಯನ್ನು ಹಬ್ಬಿಸಲು ಯತ್ನಿಸುತ್ತಿದೆ. ಈ ಆಟ ಬಹಳ ದಿನ ನಡೆಯುವುದಿಲ್ಲ. ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ. ನನ್ನ ಮಗ ಸುನೀಲ್ ಬೋಸ್ ವಿರುದ್ಧ ಈ ಹಿಂದೆ ಸುಮ್ಮನೆ ಆರೋಪ ಮಾಡಿದ್ದರು ಎಂದು ಕಿಡಿಕಾರಿದ್ದಾರೆ.
ಪೊಲೀಸ್ ತನಿಖೆ ಸರಿಯಾದ ದಾರಿಯಲ್ಲಿದ್ದು, ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವರು ಧರ್ಮದ ಬಣ್ಣ ಬಳಿಯಲು ಮುಂದಾಗಿದ್ದಾರೆ. ವೇಣುಗೋಪಾಲ್ ಪತ್ನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸುವ ಕುರಿತು ಪ್ರಯತ್ನಿಸುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.