ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನೀಡಿದ್ದ ಆದೇಶವನ್ನು ಪುನರ್ಪರಿಶೀಲಿಸುವಂತೆ ಬಂಗಾಳದ ಟಿಎಂಸಿಯ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೊಲ್ಕತಾ ಹೈಕೋರ್ಟ್ ವಜಾಗೊಳಿಸಿದೆ.
ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು, ಜೂನ್ 18 ರಂದು ನೀಡಿದ್ದ ತೀರ್ಪಿನಲ್ಲಿ, ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದಲ್ಲಿ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ಪ್ರಕರಣಗಳನ್ನು ಪರೀಕ್ಷಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ)ಕ್ಕೆ ನಿರ್ದೇಶನ ನೀಡಿತ್ತು. ಹಲವಾರು ಜನರನ್ನು ತಮ್ಮ ಮನೆಗಳಿಂದ ತೆರವುಗೊಳಿಸಿದ, ಶಾರೀರಿಕ ಹಲ್ಲೆ ನಡೆಸಿದ, ಆಸ್ತಿಗೆ ಧಕ್ಕೆ ಮಾಡಿದ ಆರೋಪಗಳನ್ನು ಹಲವು ರಿಟ್ ಅರ್ಜಿಗಳು ಕೋರ್ಟ್ ಮುಂದೆ ತಂದಿದ್ದವು. ಈ ಬಗ್ಗೆ ತಂಡವೊಂದನ್ನು ರಚಿಸಿ ತನಿಖೆ ನಡೆಸಿ ಸಮಗ್ರ ವರದಿ ನೀಡಬೇಕೆಂದು ಎನ್ಎಚ್ಆರ್ಸಿ ಅಧ್ಯಕ್ಷರಿಗೆ ಹೈಕೋರ್ಟ್ ಆದೇಶಿಸಿತ್ತು.
ಸರ್ಕಾರದ ಹೇಳಿಕೆ ಪರಿಗಣಿಸದೆ ಈ ತೀರ್ಪು ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶವನ್ನು ರೀಕಾಲ್ ಮಾಡಲು ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂಡಾಲ್ ಅವರ ನೇತೃತ್ವದ ಪಂಚಸದಸ್ಯ ಪೀಠವು ಸರ್ಕಾರದ ಈ ಅರ್ಜಿಯನ್ನು ಇಂದು ವಜಾಗೊಳಿಸಿತು. (ಏಜೆನ್ಸೀಸ್)
ಕರೊನಾ ನಿಯಮ ಗಾಳಿಗೆ ತೂರಿ ಪಕ್ಷದ ಕಛೇರಿ ಉದ್ಘಾಟನೆ: ಮಾಜಿ ಮೇಯರ್ ಬಂಧನ