More

    ಮನಸುಗಳ ಕಟ್ಟುವ ಸಾಹಿತಿ ಸತೀಶ ಕುಲಕರ್ಣಿ; ಧಾರವಾಡ ಆಕಾಶವಾಣಿ ಕೇಂದ್ರದ ಡಾ.ಬಸು ಬೇವಿನಗಿಡದ ಅಭಿಪ್ರಾಯ

    ಹಾವೇರಿ: ಮನಸ್ಸುಗಳನ್ನು ಕಟ್ಟುವ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದ ಕವಿ, ಸಾಹಿತಿ ಸತೀಶ ಕುಲಕರ್ಣಿ ಜನಪರ ಕಾಳಜಿಯುಳ್ಳವರು. ಸಾಮಾಜಿಕ ಹೊಣೆಗಾರಿಕೆ, ಜೀವನ ಪ್ರೀತಿ, ಸೈದ್ಧಾಂತಿಕ ಬದ್ಧತೆ ಮತ್ತು ತ್ಯಾಗದ ಫಲವಾಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ.ಬಸು ಬೇವಿನಗಿಡದ ಅಭಿಪ್ರಾಯ ಪಟ್ಟರು.
    ನಗರದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಸಾಹಿತಿ ಕಲಾವಿದರ ಬಳಗ ಹಾಗೂ ಗೆಳೆಯರ ಬಳಗದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜನ ಸಮುದಾಯದಲ್ಲಿ ಸಾಮರಸ್ಯ, ಕರುಣೆ ಬಯಸುವ ಕವಿ ಸತೀಶ ಎಂದರು.
    ಹೆಸ್ಕಾಂ ನಿವೃತ್ತ ಅಧಿಕಾರಿ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಸತೀಶ ಕುಲಕರ್ಣಿ ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ನೌಕರನಾಗಿ ವೃತ್ತಿ ಗೌರವ ಉಳಿಸಿಕೊಂಡು, ಸಮಾಜದ ಸೂಕ್ಷ್ಮತೆಗಳನ್ನು ಅವಲೋಕಿಸಿದವರು. ವಿಶೇಷವಾಗಿ ಬೀದಿ ನಾಟಕಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದವರು ಎಂದರು.
    ಶೇಷಗಿರಿ ಕಲಾ ತಂಡದ ರಂಗ ನಿರ್ದೇಶಕ ಸಂತೋಷ ಎಸ್.ಎಲ್., ಮೈಸೂರಿನ ಯುವರಾಜ ಕಾಲೇಜ್‌ನ ಡಾ.ಪುಟ್ಟರಾಜು ಟಿ.ಎಸ್. ಮತ್ತು ಸಾಹಿತಿ ಕಲಾವಿದರ ಬಳಗದ ಎಸ್.ಆರ್.ಹಿರೇಮಠ ಮಾತನಾಡಿದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ವಿ.ಎಂ. ಪತ್ರಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಶಿಗ್ಗಾಂವಿ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಮಹಾಂತೇಶ ಕರ್ಜಗಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.
    ಕರಿಯಪ್ಪ ಹಂಚಿನಮನಿ, ಕಾಂಚನಾ ಕುಲಕರ್ಣಿ, ಸಂಕಮ್ಮ ಸಂಕಣ್ಣನವರ, ಪರಿಮಳಾ ಜೈನ್, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ಶಂಕರ ಬಡಿಗೇರ, ಕೆ.ಆರ್.ಹಿರೇಮಠ, ಮಹಾಂತೇಶ ಮರಿಗೂಳಪ್ಪನವರ, ಮುತ್ತುರಾಜ ಹಿರೇಮಠ, ಹನುಮಂತಸಿಂಗ್ ರಜಪೂತ, ನಾಗರಾಜ ಹುಡೇದ, ಶಂಕರ ತುಮ್ಮಣ್ಣವರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts