ಹಾವೇರಿ: ಕಳೆದ ವರ್ಷ ಜಿಲ್ಲೆಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ವರ್ಷದ ಸಂಭ್ರಮಾಚರಣೆ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಆರ್ಟಿಒ ಬಳಿಯ ಅಜ್ಜಯ್ಯ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ನೆರವೇರಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಡೀ ನಾಡಿನ ಗಮನ ಸೆಳೆದಿತ್ತು. ಅಜ್ಜಯ್ಯನ ಸನ್ನಿಧಿಯಲ್ಲಿ ಯಾವುದೇ ವಿಘ್ನಗಳಿಲ್ಲದೆ ಸುಗಮವಾಗಿ ಸಮ್ಮೇಳನ ಜರುಗಿತ್ತು. ಜತೆಗೆ ಸಮ್ಮೇಳನದ ಪ್ರಥಮ ವರ್ಷದ ಸಂಭ್ರಮವನ್ನು ಅನುಭವಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅಜ್ಜಯ್ಯನ ಕೃಪೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ಮಾತನಾಡಿ, ಕಳೆದ ವರ್ಷ ಸಮ್ಮೇಳನ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಪಂಚಾಮೃತ ಅಭಿಷೇಕ ಸಲ್ಲಿಸಲಾಗಿತ್ತು. ಅದೇ ಸಂದರ್ಭದಲ್ಲಿ ಸಮ್ಮೇಳನದ ಪ್ರಥಮ ವರ್ಷಾಚರಣೆ ಸಂದರ್ಭದಲ್ಲಿ ಮತ್ತೊಮ್ಮೆ ವಿಶೇಷ ಪೂಜೆ ನೆರವೇರಿಸುವುದಾಗಿ ಸಂಕಲ್ಪ ಮಾಡಿದ್ದೆವು. ಅದು ಇದೀಗ ಈಡೇರಿತು ಎಂದರು.
ಸಾಹಿತಿ ಸತೀಶ ಕುಲಕರ್ಣಿ, ಕಾಂಚನಾ ಕುಲಕರ್ಣಿ, ಈರಣ್ಣ ಬೆಳವಡಿ, ರಾಜೇಂದ್ರ ಹೆಗಡೆ, ನಿಂಗಪ್ಪ ಮಣ್ಣಮ್ಮನವರ, ಸವಿತಾ ಮಣ್ಣಮ್ಮನವರ, ರೇಣುಕಾ ಆಲದಕಟ್ಟಿ, ಪೃಥ್ವಿರಾಜ್ ಬೆಟಗೇರಿ, ನೇತ್ರಾವತಿ ಅಂಗಡಿ, ಶಶಿಕಲಾ ಅಕ್ಕಿ, ಚಂದ್ರಪ್ಪ ಸನದಿ ಇದ್ದರು. ಅರ್ಚಕ ಶರಣಯ್ಯ ಪೂಜಾ ವಿಧಿ ವಿಧಾನ ನೆರವೇರಿಸಿದರು.