ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ವಿಷಯ ತಿಳಿದ ಕೂಡಲೇ ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಐಜಿಪಿ ಭೇಟಿ ಕೊಟ್ಟಿದ್ದರು. ಈಗಾಗಲೇ ಆರೋಪಿಗಳ ಬಂಧನವಾಗಿದೆ. ಎಸ್ಐಟಿ ರಚಿಸಿದರೂ ಅದೇ ಪೊಲೀಸರು ತನಿಖೆ ನಡೆಸುವುದರಿಂದ ಎಸ್ಐಟಿ ಅಗತ್ಯವಿಲ್ಲ ಎಂದು ಹೇಳಿದರು.
ಅತ್ಯಾಚಾರ ಸಂಬಂಧ ದೂರು ದಾಖಲಿಸದಂತೆ 50 ಲಕ್ಷ ರೂ.ಆಮಿಷವೊಡ್ಡಿದ್ದರು ಎಂಬ ಸಂತ್ರಸ್ತೆ ಹೇಳಿಕೆ ಬಗ್ಗೆ ದೂರು ಬಂದಿಲ್ಲ. ಪುರಾವೆ ಲಭಿಸಿದರೆ ಯಾರೇ ತಪ್ಪಿತಸ್ಥರಿದ್ದರೂ ಬಂಧಿಸುತ್ತೇವೆ ಎಂದರು. 6 ತಿಂಗಳಲ್ಲಿ ನೈತಿಕ ಪೊಲೀಸ್ಗಿರಿ ಕುರಿತು ಎಫ್ಐಆರ್ ದಾಖಲಾಗಿ ಆರೋಪಿಗಳ ಬಂಧನವಾಗಿದೆ. ಕೋಮು ಪ್ರಚೋದನೆ ಪ್ರಕರಣಗಳಲ್ಲಿ ನಿರ್ದಿಷ್ಟ ಸಂಘಟನೆ, ಧರ್ಮ, ಜಾತಿಯನ್ನು ಗುರಿಯಾಗಿಸಿ ಕ್ರಮ ಜರುಗಿಸುತ್ತಿಲ್ಲ.
ಅಪರಾಧ ಪ್ರಕರಣಗಳು ಜರುಗಿದಾಗ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ ಹೊರತು ಅದಕ್ಕೂ ಮೊದಲು ಯಾರನ್ನೂ ಟಾರ್ಗೆಟ್ ಮಾಡುವುದಿಲ್ಲ. ಕ್ರಿಮಿನಲ್ಗಳಿಗೆ ಧರ್ಮ, ಜಾತಿ ಮತ್ತು ಸಮುದಾಯದ ಇರುವುದಿಲ್ಲ ಎಂದು ಡಾ.ಅಲೋಕ್ ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.