ಹಾವೇರಿ: ರಸ್ತೆಯಲ್ಲೇ ಒಲೆ ಹಚ್ಚಿ ಚಹಾ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮೈಲಾರ ಮಹದೇವ ವೃತ್ತದಲ್ಲಿ ರಸ್ತೆ ಮೇಲೆ ಅಡುಗೆ ಸಿಲಿಂಡರ್ ಇಟ್ಟು, ಒಲೆ ಮೇಲೆ ಚಹಾ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ, ನಾವು ಬಡವರ ಪರ ಕಾರ್ಯಕ್ರಮ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಬಡವರಿಗೆ ತೊಂದರೆ ಕೊಡುತ್ತಿದೆ. ಅಡುಗೆ ಅನಿಲದ ಬೆಲೆ ದಿಢೀರ್ ಏರಿಕೆಯಾಗಿರುವುದರಿಂದ ಬಡವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ದೂರಿದರು.
ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂ. ಗಡಿದಾಟುತ್ತಿದ್ದು, ಕಷ್ಟದಲ್ಲಿರುವ ಜನತೆ ಮರಳಿ ಸೌದೆ ಒಲೆ ಬಳಕೆ ಮಾಡುವಂತಾಗಿದೆ. ಇದರಿಂದ ದಮ್ಮು, ಅಸ್ತಮಾ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಕಾರಣ ಕೂಡಲೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಇಳಿಕೆ ಮಾಡಬೇಕು ಇಲ್ಲವಾದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಹಶಮತ್ ರಿತ್ತಿ, ವಸಂತಾ ಬಾಗೂರ, ಬಸಮ್ಮ ಹಿರೇಮಠ, ಸಾವಿತ್ರಾ ಮಿಠಾಯಿಗಾರ, ಪ್ರೇಮಾ ಅಂಗಡಿ, ಶಮಶಾದ ಕುಪ್ಪೇಲೂರ, ಲೀಲಾವತಿ ಹೊಸಕಟ್ಟಿ, ಉಮೀದ ನದಾಫ್, ಲತಾ ದಾನಪ್ಪನವರ, ಶೋಭಾ ಯೋಗಿಕೊಪ್ಪ, ಎಂ.ಎಂ. ಮೈದೂರ, ಕುಮಾರ ರಾಮಾಪುರ, ಗಣೇಶ ಬಿಷ್ಟಣ್ಣನವರ, ಸತೀಶ ಇಳಿಗೇರ ಇತರರಿದ್ದರು.