ಹಟ್ಟಿಚಿನ್ನದಗಣಿ : ಹಟ್ಟಿ-ರಾಯಚೂರು ಸಂಪರ್ಕ ರಸ್ತೆಯಲ್ಲಿರುವ ಶಿಥಿಲಗೊಂಡ ಕಾಕಾ ನಗರದ ಸೇತುವೆಯನ್ನು ಆದಷ್ಟು ಬೇಗ ಮರು ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಲಬುರಗಿ ವಿಭಾಗದ ಮುಖ್ಯ ಇಂಜಿನಿಯರ್ ಜಗನ್ನಾಥ್ ಹಲಿಂಗೆ ಭರವಸೆ ನೀಡಿದರು.
ಕಾಕಾನಗರ ಹಾಗೂ ಹಟ್ಟಿ ಕ್ಯಾಂಪ್ ಮತ್ತು ಹಟ್ಟಿ ಪಟ್ಟಣ ಸಂಪರ್ಕಿಸುವ ಶಿಥಿಲಗೊಂಡ ಸೇತುವೆಗಳನ್ನು ವೀಕ್ಷಿಸಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿಥಿಲಗೊಂಡಿರುವ ಬೈಪಾಸ್ ರಸ್ತೆಯ ಸೇತುವೆಗೆ ತಾತ್ಕಾಲಿಕವಾಗಿ ರಾಡ್ ಕಟ್ಟಿ ಸಿಸಿ ಹಾಕಿ 10ರಿಂದ 15 ವರ್ಷಗಳವರೆಗೆ ಬಾಳಿಕೆ ಬರುವಂತೆ ಮಾಡಲಾಗುವುದು. ಕಾಕಾನಗರ ಸೇತುವೆ ಮರು ನಿರ್ಮಾಣ ಕಾಮಗಾರಿಯನ್ನು 30 ಮೀ. ವಿಸ್ತರಣೆ ಮಾಡಲು 4.30 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನದ ಕೊರತೆಯಿರುವುದರಿಂದ ಹಟ್ಟಿಚಿನ್ನದಗಣಿ ಕಂಪನಿಯಿಂದ ನಿರ್ಮಾಣ ಮಾಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಬಳ್ಳಾರಿ ವಲಯದ ಅಧೀಕ್ಷಕ ಇಂಜಿನಿಯರ್ ಮಲ್ಲಿಕಾರ್ಜುನ್, ರಾಯಚೂರು ಇಇ ಚನ್ನಬಸ್ಸಪ್ಪ, ಲಿಂಗಸುಗೂರು ಎಇಇ ಗೋಪಾಲರೆಡ್ಡಿ ಇತರರಿದ್ದರು.