ಹನೂರು: ತಾಲೂಕಿನ ಕಾಡಂಚಿನ ಗಾಣಿಗಮಂಗಲ ಗ್ರಾಮದಲ್ಲಿ ಸೋಮವಾರ ಕೊಂಡವನ್ನು ಹಾಯುವ ವೇಳೆ ಅರ್ಚಕರೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮದ ರಂಗಸ್ವಾಮಿ ದೇಗುಲದ ಅರ್ಚಕ ಮುನಿ ವೆಂಕಟೇಗೌಡ (65) ಗಾಯಗೊಂಡವರು. ಗ್ರಾಮದಲ್ಲಿ ಜಡೇಸ್ವಾಮಿ ಹಬ್ಬದ ಹಿನ್ನಲೆ ಸೋಮವಾರ ಸಂಜೆ 4.30ರಲ್ಲಿ ಕೊಂಡೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಹರಕೆ ಹೊತ್ತಿದ್ದ ಕೆಲವರು ಕೊಂಡ ಹಾಯ್ದರು. ಆದರೆ, ಮುನಿ ವೆಂಕಟೇಗೌಡ ಅವರು ಕೊಂಡ ಹಾಯುವಾಗ ಆಯತಪ್ಪಿ ಕೆಂಡದೊಳಗೆ ಬಿದ್ದರು. ಪರಿಣಾಮ ಗಾಯಗೊಂಡ ಇವರನ್ನು ಗ್ರಾಮಸ್ಥರು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಎಚ್ಒ ಡಾ. ಚಿದಂಬರಂ ಅವರು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.