ಯಲಬುರ್ಗಾ/ಕುಕನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಸಚಿವರಾದ ಹಿನ್ನೆಲೆಯಲ್ಲಿ ಅವಳಿ ತಾಲೂಕುಗಳಲ್ಲಿ ಸಂಭ್ರಮ ಕಂಡುಬಂತು. ಯಲಬುರ್ಗಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಬುಧವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ಹಾಲಪ್ಪ ಆಚಾರ್ ನಿಷ್ಠೆ ಗುರುತಿಸಿ ಬಿಜೆಪಿ ಹೈಕಮಾಂಡ್ ಸಚಿವರನ್ನಾಗಿ ಮಾಡಿದೆ. ರಾಜ್ಯದ ಅಭಿವೃದ್ಧಿಗಾಗಿ ಸಚಿವ ಆಚಾರ್ ಪ್ರಾಮಾಣಿಕ ಸೇವೆ ಮಾಡಲಿದ್ದಾರೆ. ಕ್ಷೇತ್ರದಲ್ಲಿ ನೀರಾವರಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ನೀರಾವರಿ ಕನಸು ಅವರಿಂದಲೇ ನನಸಾಗಲಿದೆ ಎಂದರು.
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಹಚ್ಚಿ, ಸಿಹಿ ಹಂಚಿ ಬುಧವಾರ ಸಂಭ್ರಮ ವ್ಯಕ್ತಪಡಿಸಿದರು. ಮುಖಂಡ ರಶೀದಸಾಬ್ ಹಣಜಗಿರಿ ಮಾತನಾಡಿ, ಹಾಲಪ್ಪ ಆಚಾರ್ಗೆ ಸಚಿವ ಸ್ಥಾನ ನೀಡಿ ಬಿಜೆಪಿ ಹೈಕಮಾಂಡ್ ಉತ್ತಮ ನಿರ್ಧಾರ ಕೈಗೊಂಡಿದೆ. ಈ ಭಾಗದ ಜನತೆಯ ಸೇವೆ ಮಾಡಲು ಹಾಗೂ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.