ಬೆಂಗಳೂರು: ‘ಬಿಗ್ ಬಾಸ್’ನ ಎಂಟನೇ ಸೀಸನ್ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಜನವರಿಯ ಮೂರನೆಯ ವಾರದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಮಧ್ಯೆ, ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎಂಬ ಚರ್ಚೆ ಶುರುವಾಗಿದ್ದು, ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ‘ಬಿಗ್ ಬಾಸ್’ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.
ಇದನ್ನೂ ಓದಿ: ನಾಲ್ಕು ವರ್ಷಗಳ ನಂತರ ಜತೆಯಾಗಿ ನಟಿಸಿದ ಯಶ್-ರಾಧಿಕಾ
‘ಬಿಗ್ ಬಾಸ್’ ಕಾರ್ಯಕ್ರಮದ ಈ ಹಿಂದಿನ ಏಳು ಸೀಸನ್ಗಳಲ್ಲಿ ರಾಜಕಾರಣಿಗಳು ಭಾಗವಹಿಸಿರಲಿಲ್ಲ. ಬರೀ ಕನ್ನಡ ಚಿತ್ರರಂಗದ ನಟ-ನಟಿಯರು, ಮಾಡೆಲ್ಗಳು, ಜನಸಾಮಾನ್ಯರು ಮಾತ್ರ ಭಾಗವಹಿಸಿದ್ದರು. ಈ ಹಿಂದೆ ಒಂದಿಬ್ಬರು ವಿವಾದಿತ ರಾಜಕಾರಣಿಗಳು, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಯಾರೂ ಭಾಗವಹಿಸಲಿಲ್ಲ.
ಹೀಗಿರುವಾಗಲೇ ‘ಹಳ್ಳಿ ಹಕ್ಕಿ’ ಎಂದೇ ಕರೆಯಲ್ಪಡುವ ರಾಜಕಾರಣಿ ಮತ್ತು ಸಾಹಿತಿ ಎಚ್. ವಿಶ್ವನಾಥ್ ಅವರು, ‘ಬಿಗ್ ಬಾಸ್’ನ ಎಂಟನೇ ಸೀಸನ್ನಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಕಾರ್ಯಕ್ರಮದ ಆಯೋಜಕರು ವಿಶ್ವನಾಥ್ ಅವರನ್ನು ಸಂಪರ್ಕಿಸಿದ್ದಾರಂತೆ. ಆದರೆ, ವಿಶ್ವನಾಥ್ ಅವರು ಇದಕ್ಕೆ ಇನ್ನೂ ಸಮ್ಮತಿ ಸೂಚಿಸಿಲ್ಲ.
ವಿಶ್ವನಾಥ್ ಅವರು ಕಳೆದ ವರ್ಷ ಕಾಂಗ್ರೆಸ್ ಪಕ್ಷವನ್ನು ಸೇರಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು. ವಿಧಾನಸಭೆ ಚುನಾವಣೆಗಳಲ್ಲಿ ಸೋತಿದ್ದ ಅವರು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ಸಚಿವಾಕಾಂಕ್ಷಿಯಾಗಿದ್ದರು. ಆದರೆ, ಅವರು ಸಚಿವರಾಗಲು ಅನರ್ಹರೆಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅವರು ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗುವುದಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ನಾಯಕರ ವಿರುದ್ಧ ಅವರು ವಿರುದ್ಧ ಟೀಕೆ ಮಾಡಿದ್ದರು.
ಇದನ್ನೂ ಓದಿ: ಸನ್ನಿ ಡಿಯೋಲ್ಗೆ ‘ವೈ’ ಕೆಟಗರಿ ಭದ್ರತೆ … ಯಾಕೆ ಹೇಳಿ?
ಹೀಗಿರುವಾಗಲೇ ವಿಶ್ವನಾಥ್ ಅವರು ‘ಬಿಗ್ ಬಾಸ್’ನ ಎಂಟನೇ ಸೀಸನ್ನಲ್ಲಿ ಸ್ಪಧಿರ್ಯಾಗಲಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ. ಈ ಸುದ್ದಿ ನಿಜವಾಗುತ್ತದೋ ಅಥವಾ ಗಾಳಿಸುದ್ದಿಯಾಗುತ್ತದೋ ಎಂಬುದನ್ನು ಕಾಲವೇ ಹೇಳಬೇಕು.