ಎಚ್.ಡಿ.ಕೋಟೆ: ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಲಹಳ್ಳಿ ಹಾಡಿಗೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಸೋಮವಾರ ಜನ ಅಧಿಕಾರ ಸುರಕ್ಷಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಳೆದ ಮೂರು ತಿಂಗಳ ಹಿಂದೆ ಹಾಡಿಗೆ ಮೂಲಸೌಕರ್ಯ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದಾಗ, 15 ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಇದುವರೆಗೂ ಕನಿಷ್ಠ ಪಕ್ಷ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ದೊರಕದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರ ಎಚ್ಚರಿಸಿದರು.
ಅಳಲಹಳ್ಳಿ ಹಾಡಿಗೆ ನೀರು ಪೂರೈಸಬೇಕು, ಅಂಗನವಾಡಿ ಕಟ್ಟಡ ನಿರ್ಮಾಣ, ಶೌಚಗೃಹ, ರಸ್ತೆ, ಸಮುದಾಯ ಭವನ, ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾದನೂರು ಪಿಡಿಒ ಶಿಲ್ಪಾ ಹಾಗೂ ತಹಸೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಜನ ಅಧಿಕಾರ ಸುರಕ್ಷಾ ಸಮಿತಿಯ ಮುಖಂಡರಾದ ಟಿ.ಆರ್.ಸುನೀಲ್, ಮಾದಮ್ಮ, ನಿಂಗರಾಜಮ್ಮ, ಜವರಮ್ಮ, ಕೂಸಮ್ಮ, ಸಣ್ಣದೇವಮ್ಮ, ಬೆಳ್ಳಮ್ಮ, ಗೋಪಮ್ಮ, ಸಿದ್ದಮ್ಮ, ದೇವಯ್ಯ, ನಿಂಗಯ್ಯ, ಮಹೇಶ್, ಸೋಮ, ಸೂರಿ, ಮಧು, ಮಹೇಶ, ಮಾದು, ಮಣಿಕಂಠ ಹಾಗೂ ಅಳಲಹಳ್ಳಿ ಹಾಡಿಯ ನಿವಾಸಿಗಳು ಇದ್ದರು.