ಗುಬ್ಬಿ : ಜಮೀನು, ಮನೆ ಮಾರಾಟ ನೋಂದಣಿ ಹಾಗೂ ಸಾಲ ಸೌಲಭ್ಯಕ್ಕೆ ಋಣಭಾರ ಪ್ರಮಾಣಪತ್ರ(ಇಸಿ) ಪಡೆಯಲು ಉಪನೋಂದಣಿ ಕಚೇರಿಗೆ 8 ದಿನದಿಂದ ಅಲೆದಾಡಿದ ಸಾರ್ವಜನಿಕರಿಗೆ ‘ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕೆಲಸಗಳು ಸ್ಥಗಿತ’ ಎಂಬ ಸೂಚನಾ ಫಲಕದಲ್ಲಿನ ಮುದ್ರಿತ ಪತ್ರಗಳು ಆತಂಕ ಸೃಷ್ಟಿದ್ದಲ್ಲದೇ, ಸೋಮವಾರ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
6 ದಿನದ ಹಿಂದೆ 10 ಕೆವಿ ಸಾಮರ್ಥ್ಯದ ಯುಪಿಎಸ್ ಸುಟ್ಟಿರುವ ಕಾರಣ ಉಪನೋಂದಣಿ ಕಚೇರಿ ಸಂಪೂರ್ಣ ಲಾಕ್ಡೌನ್ ಆಗಿದೆ. ನಿತ್ಯ ನೂರಾರು ಮಂದಿ ಕಚೇರಿಗೆ ಬಂದು ಕೆಲಸವಾಗದೆ ವಾಪಸ್ ತೆರಳುತ್ತಿದ್ದರು. ಕಚೇರಿಯ ನಿರ್ವಹಣೆಗೆ ಒತ್ತು ನೀಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವಂತೆ ಕಾಣುತ್ತಿತ್ತು. 8 ದಿನಗಳಿಂದ ಪರ್ಯಾಯ ವ್ಯವಸ್ಥೆ ಮಾಡದೆ, ಸುಟ್ಟ ಯುಪಿಎಸ್ ದುರಸ್ತಿ ಮಾಡಿಸದೆ ಕಚೇರಿಯಲ್ಲಿ ಕಾಲ ಕಳೆದು ಹೋಗುತ್ತಿರುವಂತಾಗಿದೆ. ನೋಟಿಸ್ ಬೋರ್ಡ್ ನಲ್ಲಿರುವ ತಾಂತ್ರಿಕ ದೋಷ ಎಂಬ ಪದ ರಾಜ್ಯ ಸಮಸ್ಯೆ ಎಂದು ತಿಳಿದು ಗ್ರಾಹಕರು ಹಿಂದಿರುಗಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಸಾಮಾಜಿಕ ಕಾರ್ಯಕರ್ತ ನಾಗಸಂದ್ರ ವಿಜಯ್ಕುಮಾರ್, ಸಾಲ ಸೌಲಭ್ಯಕ್ಕೆ ಇಸಿ ಪಡೆಯಲು ಪರದಾಡಿದ ರೈತರ ಸಂಕಷ್ಟಕ್ಕೆ ಉತ್ತರ ಕೊಡುವವರ್ಯಾರು ಎಂದು ಧ್ವನಿಯಾದರು.
6 ವರ್ಷದ ಹಿಂದೆ ಅವಳಡಿಸಿಕೊಂಡ 248 ಕೆವಿ ಪವರ್ ಯುಪಿಎಸ್ ನಿರ್ವಹಣೆ ಅವಧಿ ಮುಗಿದ ನಂತರದಲ್ಲಿ ಪವರ್ ಓನ್ ಮೈಕ್ರೋ ಸಿಸ್ಟ್ಂ ಕಂಪನಿ ದುರಸ್ತಿಗೆ ಸರ್ವೀಸ್ ಹಣ ಕೇಳುತ್ತಿದೆ. ಹಣ ನೀಡಿ ಕೆಲಸ ಪೂರೈಸಿಕೊಳ್ಳುವಲ್ಲಿ ವಿಳಂಬ ಅನುಸರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈ ಕಚೇರಿ ನಂಬಿ ಬದುಕು ಕಟ್ಟಿಕೊಂಡ ನೂರಾರು ಮಂದಿ ಪತ್ರಬರಹಗಾರರು ಕೆಲಸವಿಲ್ಲದೇ ಕಚೇರಿ ಮುಂದೆ ಕಾಲಹರಣ ಮಾಡುತ್ತಿದ್ದಾರೆ. ಸ್ಥಳೀಯ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಲ್ಲಿ ಬೇಜವಾಬ್ದಾರಿ ತೋರಿದ್ದು ಅಲ್ಲದೇ ತಾಂತ್ರಿಕ ದೋಷ ಎಂಬ ಬರಹ ತೋರಿಸಿ ಇಡೀ ರಾಜ್ಯಕ್ಕೆ ಆಗಿರುವ ಸಮಸ್ಯೆ ಎಂಬಂತೆ ಬಿಂಬಿಸಲಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಪ್ರಜ್ಞಾವಂತರು ಲಕ್ಷಗಟ್ಟಲೇ ಸರ್ಕಾರಕ್ಕೆ ಆದಾಯ ತರುವ ಈ ಇಲಾಖೆ ಈ ಮಟ್ಟಕ್ಕೆ ನಿರ್ಜೀವವಾಗಿರುವ ಬಗ್ಗೆ ಮೇಲಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.