ಲಖನೌ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಉದ್ಘಾಟಿಸಿದ ಪ್ರತಿಮೆಯೊಂದರ ಫಲಕದ ಮೇಲಿದ್ದ ಅವರ ಹೆಸರಿಗೆ ಕಪ್ಪು ಬಣ್ಣ ಬಳೆದಿರುವ ಪ್ರಸಂಗ ನಡೆದಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ನಾಯ್ಡ ಜಿಲ್ಲೆಯ ದಾದ್ರಿ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸುಮಾರು 150 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ ಎನ್ನಲಾಗಿದೆ.
ದಾದ್ರಿಯ ಖಾಸಗಿ ಕಾಲೇಜೊಂದರಲ್ಲಿ 9ನೇ ಶತಮಾನದ ರಾಜ ಮಿಹಿರ್ ಭೋಜ್ನ 15 ಅಡಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಸೆ.22 ರಂದು ಅದರ ಉದ್ಘಾಟನೆ ಮಾಡಿದ್ದರು. ಆದರೆ, ಪ್ರತಿಮೆಯ ಕೆಳಗಿನ ಫಲಕದಲ್ಲಿ ರಾಜನ ಹೆಸರ ಮುಂಚೆ ‘ಗುರ್ಜಾರ್’ ಎಂಬ ಶಬ್ದವನ್ನು ತೆಗೆಯಲಾಗಿತ್ತು. ಈ ಬಗ್ಗೆ ಗುರ್ಜಾರ್ ಸಮುದಾಯದ ಜನರು ಆವೇಶಕ್ಕೊಳಗಾಗಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಮಹಾಪಂಚಾಯತ್ ನಡೆಸಿದ್ದರು ಎನ್ನಲಾಗಿದೆ.
ಮಂಗಳವಾರದಂದು ಹಲವು ಜನ ಗುಂಪಾಗಿ ಬಂದು ಫಲಕದ ಮೇಲಿದ್ದ ಸಿಎಂ ಹೆಸರಿನ ಮೇಲೆ ಕಪ್ಪು ಪೇಂಟ್ ಬಳಿದು ಹೋದರು ಎಂಬ ಮಾಹಿತಿ ಬಂತು. ಈ ಹಿನ್ನೆಲೆಯಲ್ಲಿ ಎಫ್.ಐ.ಆರ್ ದಾಖಲಿಸಿದ್ದು, ಬಹುತೇಕ ಜನರು ಗುರುತು ಪತ್ತೆ ಹಚ್ಚಲಾಗಿದೆ. ತನಿಖೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ದಾದ್ರಿ ಠಾಣಾಧಿಕಾರಿ ಪ್ರದೀಪ್ ತ್ರಿಪಾಠಿ ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ಯೋಗಿ ಹೆಸರಿನೊಂದಿಗೆ ದಾದ್ರಿ ಶಾಸಕ ತೇಜ್ಪಾಲ್ ನಗರ್, ರಾಜ್ಯಸಭಾ ಸದಸ್ಯ ಸುರೇಂದ್ರ ನಗರ್ ಮತ್ತು ಸಚಿವ ಅಶೋಕ ಕಟಾರಿಯ ಅವರ ಹೆಸರುಗಳ ಮೇಲೂ ಕಪ್ಪು ಬಣ್ಣ ಬಳಿಯಲಾಗಿದೆ ಎನ್ನಲಾಗಿದೆ. ಈ ನಡುವೆ ಫಲಕದಲ್ಲಿ ರಾಜಾ ಮಿಹಿರ್ ಭೋಜ್ ಹೆಸರಿನ ಮುಂದೆ ಗುರ್ಜಾರ್ ಎಂಬ ಶಬ್ದವನ್ನು ಸೇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)
ಹೀಗೊಂದು ವಿಚಿತ್ರ ಪ್ರಸಂಗ: ತನ್ನದೇ ಶೋಧ ಕಾರ್ಯದಲ್ಲಿ ಪಾಲ್ಗೊಂಡ ಪುರುಷ!