ಜಗಳೂರು: ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿಯುಳ್ಳ ಜಗಳೂರು ತಾಲೂಕನ್ನು ಹಸಿರೀಕರಣ ಮಾಡುವ ಉದ್ದೇಶ ಹೊಂದಿದ್ದು, ಅತಿ ಹೆಚ್ಚು ಸಸಿಗಳನ್ನು ನೆಡಲಾಗುವುದು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ರಾಜಣ್ಣ ಇಂಗಿತ ವ್ಯಕ್ತಪಡಿಸಿದರು.
ತಾಲೂಕಿನ ಸಂಗೇನಹಳ್ಳಿ ಸಮೀಪದ ಅರಣ್ಯ ಇಲಾಖೆಯ ನರ್ಸರಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಈಗಾಗಲೇ ನರ್ಸರಿಯಲ್ಲಿ ನೇರಳೆ, ಸಾಗುವಾನಿ, ಹೊಂಗೆ, ಬೇವು, ಹುಣಸೆ, ಆಲ ಮತ್ತಿತರ ಜಾತಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, 20212ರ ಜೂನ್ನಲ್ಲಿ ರೈತರಿಗೆ ವಿತರಿಸಲಾಗುವುದು. ಪ್ರತಿ ರೈತನು ಜಮೀನಿನ ಬದುವಿನಲ್ಲಿ ನೆಟ್ಟು ಪೋಷಿಸಿದರೆ ಪರಿಸರ ರಕ್ಷಣೆ ಜತೆಗೆ ತನಗೂ ಲಾಭವಾಗಲಿದೆ. ಸಸಿ ನೆಡುವುದಕ್ಕಿಂತ ಅದರ ಪೋಷಣೆ ಮತ್ತು ಸಂರಕ್ಷಣೆ ಮಾಡುವುದು ಬಹುಮುಖ್ಯ ಎಂದು ಹೇಳಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಟಿ.ಆರ್. ಅಮೃತಾ ಮಾತನಾಡಿ, ಮುಂದಿನ 2022ನೇ ಸಾಲಿನ ಜೂನ್ನಲ್ಲಿ ರೈತರಿಗೆ ಸಸಿಗಳನ್ನು ನೀಡಲಾಗುವುದು. ಮಹಾಘನಿ, ಟೀಕ್, ಹೆಬ್ಬೇವು, ಸಿಲ್ವಾರ್, ರಕ್ತ ಚಂದನ, ಶ್ರೀಗಂಧ, ನುಗ್ಗೆ, ಸೀತಾಫಲ, ಬಿದಿರು ಮತ್ತಿತರ ಜಾತಿಯ ಸಸಿಗಳು ಲಭ್ಯವಿದ್ದು, ಆಸಕ್ತ ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.