ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಒದಗಿಸಿರುವ ಪರಿಹಾರ ಸಾಮಗ್ರಿಗಳ ಮೇಲೆ ಶಾಸಕ ಅರವಿಂದ ಲಿಂಬಾವಳಿ ತಮ್ಮ ಪೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಉತ್ತರಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಜನಸಾಮಾನ್ಯರಿಗೆ ಸರಕಾರ ನೀಡುವ ಪರಿಹಾರ ಸಾಮಗ್ರಿಯೋ? ಬಿಜೆಪಿ ಪಕ್ಷದ ಕೊಡುಗೆಯೋ? ಅಥವಾ ಲಿಂಬಾವಳಿಯವರ ವೈಯಕ್ತಿಕ ದಾನವೋ? ಎಂಬುದನ್ನು ಕೂಡಲೇ ಅವರು ಸ್ಪಷ್ಟಪಡಿಸಬೇಕು ಎಂದು ಸರಣಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ಅರವಿಂದ ಲಿಂಬಾವಳಿ ಅವರು ಸರ್ಕಾರ ವಿತರಿಸುತ್ತಿರುವ ಪರಿಹಾರ ಸಾಮಗ್ರಿಗಳ ಮೇಲೆ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಒಂದು ಸಮುದಾಯವನ್ನು ಕರೊನಾ ಸೋಂಕಿಗೆ ಸಮೀಕರಿಸುತ್ತಿರುವ ಬಗ್ಗೆ ದಿವ್ಯ ಮೌನ ತಾಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬಡ ಕಾರ್ಮಿಕರ ಪರಿಹಾರ ಸಾಮಗ್ರಿಗೆ ಕೆಲ ಪ್ರಚಾರ ಪ್ರಿಯರು ತಮ್ಮ ಫೋಟೋ ಅಂಟಿಸಿಕೊಂಡು ಹಂಚುವುದಕ್ಕೆ ಅನುಮತಿ ನೀಡಿದ್ದಾರೆಯೇ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.