ರಾಯಬಾಗ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರಿಗಾಗಿ ಜಾರಿಗೆ ಬಂದ ಅನೇಕ ಯೋಜನೆಗಳು ಪ್ರತಿ ಅರ್ಹ ಫಲಾನುಭವಿಗೂ ತಲುಪಿವೆ. ಕೇಂದ್ರ ಸರ್ಕಾರ 6000 ರೂ. ರೈತರ ಖಾತೆಗೆ ಜಮಾ ಆಗಿದ್ದು, ಸದ್ಯದಲ್ಲಿಯೇ ರಾಜ್ಯ ಸರ್ಕಾರದಿಂದಲೂ 4000 ರೂ. ರೈತರ ಖಾತೆಗೆ ಸೇರಲಿವೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ತಾಲೂಕಿನ ಕೆಂಪಟ್ಟಿ ಗ್ರಾ.ಪಂ.ಕಾರ್ಯಾಲಯದಲ್ಲಿ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಂಜೂರಾದ ನ್ಯಾಯಬೆಲೆ ಅಂಗಡಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಂತೆ ಇನ್ನೊಂದು ನ್ಯಾಯಬೆಲೆ ಅಂಗಡಿಯ ಬೇಡಿಕೆ ಬಹು ದಿನಗಳಿಂದ ಇತ್ತು. ಎಲ್ಲ ಪಡಿತರದಾರರಿಗೂ ಸರಿಯಾಗಿ ರೇಷನ್ ಸಿಗಲಿ ಎಂಬ ಉದ್ದೇಶದಿಂದ ತಮ್ಮ ಮತಕ್ಷೇತ್ರದಲ್ಲಿ 6 ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರ ಮಾಡಿಸಲಾಗಿದ್ದು, ಪಡಿತರ ಬಂದ 3-4 ದಿನಗಳೊಳಗಾಗಿ ಆಹಾರ ಧಾನ್ಯಗಳನ್ನು ಹಂಚಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಯಕ್ಸಂಬಾ ಗ್ರಾಮದ ಬಸವಜ್ಯೋತಿ ಯುಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಸಹಕಾರಿ ಕೃಷಿ ಪತ್ತಿನ ಸಂಘದಿಂದ ರೈತರಿಗೆ ಸಾಲ ನೀಡಬೇಕು. ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿ ಸಂಘ ಸಂಸ್ಥೆಗಳನ್ನು ಬೆಳೆಸುವುದರೊಂದಿಗೆ ತಾವೂ ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಡಿಕೆಎಸ್ಎಸ್ಕೆ ನಿರ್ದೇಶಕ ಭರತ ಬನವಣೆ, ಪೃಥ್ವಿರಾಜ ಜಾಧವ, ಅಮಿತ ಜಾಧವ, ಸುಭಾಷ್ ನಾಯಿಕ, ವಸಂತ ದತ್ತವಾಡೆ, ರಾಯಪ್ಪ ಗುಂಡಕಲ್ಲೆ, ರಾಮಪ್ಪ ಕುಂದರಗಿ, ಮಹಾದೇವ ನಾಯಿಕ, ಶಾಮರಾವ ಸಾವಂತ ಇತರರು ಇದ್ದರು.