ಚಿಕ್ಕೋಡಿ: ಲಾಕ್ಡೌನ್ನಿಂದ ದೇಶದ ಜನರು ಆರ್ಥಿಕವಾಗಿ ಕುಗ್ಗಬಾರದೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಜನರು ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ತಾಲೂಕಿನ ಕರೋಶಿ, ಬಂಬಲವಾಡ, ಬೆಣ್ಣಿಹಳ್ಳಿ ಹಾಗೂ ಕುಂಗಟೊಳ್ಳಿ ಗ್ರಾಮಗಳಲ್ಲಿ ಭಾನುವಾರ ಬಡ ಮತ್ತು ಕೂಲಿಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು. ಎಲ್ಲರೂ ದೈಹಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಧಿಕಾರಿಗಳು, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ನಿಂಗಪ್ಪ ಕುರುಬರ, ವಿಜಯ ಕೊಠಿವಾಲೆ, ಅಣ್ಣಾಸಾಹೇಬ ಖೇಮಲಾಪುರೆ, ಸದಾಶಿವ ಹಳಂಗಳಿ, ಬಸವರಾಜ ಡೋಣವಾಡೆ ಇತರರು ಇದ್ದರು.