ನವದೆಹಲಿ: ಸತತ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯ ಸಿಎಂ ಗಾದಿಯನ್ನೇರಲು ಅರವಿಂದ್ ಕೇಜ್ರಿವಾಲ್ ಸಿದ್ಧರಾಗಿದ್ದಾರೆ. ಆಮ್ ಆದ್ಮಿ ಪಕ್ಷವು ಗೆಲುವಿನ ಸಮೀಪದಲ್ಲಿರುವ ಬೆನ್ನಲ್ಲೇ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೇಜ್ರಿವಾಲ್ ಪತ್ನಿ ಸುನೀತಾ ಅವರು ಇದಕ್ಕಿಂತ ಬಹುದೊಡ್ಡ ಉಡುಗೊರೆ ಇನ್ನೊಂದಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಈವರೆಗೂ ಸ್ವೀಕರಿಸಿದ್ದರಲ್ಲಿ ಇದೇ ಬಹುದೊಡ್ಡ ಉಡುಗೊರೆ. ಇದು ಸತ್ಯದ ಜಯವಾಗಿದೆ. ಸಮಸ್ಯೆಗಳ ಆಧಾರದ ಮೇಲೆ ರಾಜಕೀಯ ಮಾಡಬೇಕು. ಅವಹೇಳನಕಾರಿಯಂತಹ ಕಮೆಂಟ್ಗಳನ್ನು ಮಾಡಬಾರದು ಎಂಬುದನ್ನು ರಾಜಕೀಯ ಪಕ್ಷಗಳು ದೆಹಲಿ ಚುನಾವಣಾ ಫಲಿತಾಂಶ ನೋಡಿ ಕಲಿಯಬೇಕು ಎಂದರು.
ಇದೇ ವೇಳೆ ಮಾತನಾಡಿದ ಕೇಜ್ರಿವಾಲ್, ಇಂದು ನನ್ನ ಪತ್ನಿಯ ಹುಟ್ಟುಹಬ್ಬ. ನಾನು ಕೇಕ್ ತಂದಿದ್ದೇನೆ. ನಿಮ್ಮೊಂದಿಗೆ ಎಲ್ಲವನ್ನು ಹಂಚಿಕೊಳ್ಳಲಿದ್ದೇನೆ ಎಂದು ಗೆಲುವಿನ ಖಷಿಯಲ್ಲಿ ಹೇಳಿದರು.
ಇನ್ನು ಚುನಾವಣಾ ಫಲಿತಾಂಶಕ್ಕೆ ಬರುವುದಾರೆ, ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 38 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಆಪ್ ಉಳಿದ 24 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ ಮೂರು ಸ್ಥಾನಗಳಲ್ಲಿ ವಿಜಯೋತ್ಸವ ಆಚರಿಸಿದ್ದು, 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. (ಏಜೆನ್ಸೀಸ್)