ಗೋಣಿಕೊಪ್ಪ: ಕರೊನಾ ಹರಡುವಿಕೆ ನಿಯಂತ್ರಿಸಲು ದಕ್ಷಿಣ ಕೊಡಗಿನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೆ ನೀಡಿದ್ದ ವ್ಯಾಪಾರ ಸ್ಥಗಿತಕ್ಕೆ ಬುಧವಾರ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಎಲ್ಲ ವರ್ತಕರು ಅಂಗಡಿ- ಮುಂಗಟ್ಟು ಮುಚ್ಚಿ ಸಹಕಾರ ನೀಡಿದರು. ಪರಿಣಾಮ ಹೆಚ್ಚಿನ ವಾಹನ ಓಡಾಟ ಕೂಡ ಇರಲಿಲ್ಲ. ಹೊರ ಗ್ರಾಮ, ಹೊರ ಜಿಲ್ಲೆಗೆ ತೆರಳುವವರು ಮಾತ್ರ ಕಂಡುಬಂದರು.
ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯರಸ್ತೆಗೆ ಒಳಪಡುವ ಅರ್ವತೋಕ್ಲು ಗ್ರಾಪಂ ವ್ಯಾಪ್ತಿಯಲ್ಲಿ ಅಂಗಡಿ ಮುಚ್ಚದಿರುವುದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಯಿತು.
ಬಾಳೆಲೆಯಲ್ಲಿ ಸ್ವಯಂಘೋಷಿತ ವ್ಯಾಪಾರ ಸ್ಥಗಿತಕ್ಕೆ ಉತ್ತಮ ಬೆಂಬಲ ವ್ಯಕ್ತವಾಯಿತು. ಬುಧವಾರ ಮತ್ತೆ ಗ್ರಾಮಸ್ಥರು ಸಭೆ ನಡೆಸಿ ಜುಲೈ 25ರವರೆಗೆ ನಿತ್ಯ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ ಎಂದು ಜಿಪಂ ಸದಸ್ಯ ಬಾನಂಡ ಪ್ರತ್ವಿ ಮಾಹಿತಿ ನೀಡಿದ್ದಾರೆ.