More

    ಚಿನ್ನ ಕದ್ದಾತನ ಅಟ್ಟಿಸಿ ಹಿಡಿದರು!

    ಮಂಗಳೂರು: ಕಾರ್‌ಸ್ಟ್ರೀಟ್‌ನಲ್ಲಿ ಗುರುವಾರ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದೊಯ್ದ ಆರೋಪಿಯನ್ನು ಬೆನ್ನಟ್ಟಿ ಹೋದ ಜುವೆಲ್ಲರಿ ಶಾಪ್ ಮಾಲೀಕರು ಸಾರ್ವಜನಿಕರ ಸಹಕಾರದಲ್ಲಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

    ಅರುಣ್ ಜಿ. ಶೇಟ್ ಒಡೆತನದ ಅಂಗಡಿಗೆ ಮಧ್ಯಾಹ 2ರ ಸುಮಾರಿಗೆ ಬಂದ ಯುವಕ ಆಭರಣ ನೋಡುವವನಂತೆ ನಟಿಸಿದ್ದಾನೆ. ಮಾಲೀಕ ಅರುಣ್ ಜಿ.ಶೇಟ್ ಆಭರಣ ತೋರಿಸುತ್ತಿದ್ದಾಗ ಯುವಕ ಏಕಾಏಕಿ ಆಭರಣದೊಂದಿಗೆ ಓಟಕ್ಕಿತ್ತಿದ್ದಾನೆ. ಬೆನ್ನಟ್ಟಿದಾಗ ಸ್ವಲ್ಪ ದೂರ ಹೋಗುತ್ತಲೇ ಸಿಕ್ಕಿಬಿದ್ದಿದ್ದಾನೆ. ಅಷ್ಟರಲ್ಲಿ ಅಲ್ಲಿ ಸಾಕಷ್ಟು ಜನರು ಜಮಾಯಿಸಿದ್ದು, ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
    ಬಳಿಕ ಪೊಲೀರಿಗೆ ಮಾಹಿತಿ ನೀಡಿದ್ದು, ಬಂದರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೇ ಮಾದರಿಯಲ್ಲಿ ಅನೇಕ ಕಡೆಗಳಲ್ಲಿ ಕಳ್ಳತನ ನಡೆದಿದ್ದು, ಅದರಲ್ಲೂ ಇವನದೇ ಕೈಚಳಕ ಇದ್ದಿರಬಹುದು ಎಂದು ಅರುಣ್ ಶೇಟ್ ಶಂಕೆ ವ್ಯಕ್ತಪಡಿಸಿದ್ದಾರೆ.

    ಎರಡು ಕಡೆ ಚಿನ್ನ ಕದ್ದಿದ್ದ: ಆರೋಪಿ ನಗರದ ಎರಡು ಜುವೆಲ್ಲರಿಗಳಲ್ಲಿ ಹಿಂದೆ ಇದೇ ರೀತಿ ಚಿನ್ನ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಜ.14ರಂದು ಜಿಎಚ್‌ಎಸ್ ಕ್ರಾಸ್ ರಸ್ತೆಯ ಆನಂದ ಜುವೆಲ್ಲರ್ಸ್‌ಗೆ ಸಂಜೆ ಬಂದಿದ್ದ ಈತ ಚಿನ್ನದ ಸರವನ್ನು ಕೈಯಲ್ಲಿ ಹಿಡಿದು ಅದರ ಬೆಲೆ ಕೇಳಿದ್ದ. ಬಳಿಕ ಇನ್ನೊಂದು ಶೋಕೇಸ್‌ನಲ್ಲಿದ್ದ ಚಿನ್ನದ ಸರ ತೋರಿಸುವಂತೆ ಹೇಳಿದ. ಅಂಗಡಿಯವರು ಚಿನ್ನದ ಸರ ತೋರಿಸಲು ಹಿಂದಿರುಗುವ ವೇಳೆ ಮೊದಲು ಕೊಟ್ಟ ಚಿನ್ನದ ಸರದೊಂದಿಗೆ ಓಡಿ ಪರಾರಿಯಾಗಿದ್ದ. ಅಂದು 38,000 ರೂ. ಮೌಲ್ಯದ ಚಿನ್ನ ಎಗರಿಸಿದ್ದ. ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಲೇಡಿಗೋಶನ್ ಆಸ್ಪತ್ರೆ ಬಳಿಯ ಪೂಜಾ ಜುವೆಲ್ಲರ್ಸ್‌ ಅಂಗಡಿಗೆ ಫೆ.8ರಂದು ರಾತ್ರಿ 7.30ರ ವೇಳೆಗೆ ಬಂದಿದ್ದ ಈತ 1 ಪವನ್ ಚಿನ್ನದ ಸರ ತೋರಿಸಲು ಹೇಳಿ, ಅದನ್ನು ಪಡೆದು ಇನ್ನೊಂದನ್ನು ತೋರಿಸಲು ಕೇಳಿ 8 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಈಗ ಆ ಎರಡು ಅಂಗಡಿ ಮಾಲೀಕರು ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts