ಗೊಳಸಂಗಿ: ಸ್ಥಳೀಯ ಸಿಂಡಿಕೇಟ್ ಬ್ಯಾಂಕ್ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದರಿಂದ ನಿಡಗುಂದಿ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ಶುಕ್ರವಾರ ಸಿಡಿಮಿಡಿಗೊಂಡು ಪಿಡಿಒಗೆ ನೋಟಿಸ್ ನೀಡಿದರು.
ಶುಕ್ರವಾರ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ತಹಸೀಲ್ದಾರ್, ಕರೊನಾ ಸೋಂಕನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಹಣದ ವಹಿವಾಟು ನಡೆಸಲು ಬ್ಯಾಂಕಿಗೆ ಬಂದಿರುವ ನೀವು ನಿರ್ಲಕ್ಷೃ ತೋರಿದಲ್ಲಿ ಹೆಣವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಜಾಗೃತಿ ಅಗತ್ಯ ಎಂದು ಎಚ್ಚರಿಸಿದರು.
ಗ್ರಾಮದೆಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಇನ್ನಷ್ಟು ಜಾಗೃತಿ ಮೂಡಿಸುವಂತೆ ಪಿಡಿಒ ಎಸ್.ಜೆ. ಉದಯಕುಮಾರ ಅವರಿಗೆ ನೋಟಿಸ್ ಜಾರಿ ಮಾಡಿದರು.
ಬಳಿಕ ಕಡಲೆ ಖರೀದಿ ಕೇಂದ್ರ ಮತ್ತು ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿದರು. ಗ್ರಾಪಂನಲ್ಲಿ ಕೆಲ ಸಿಬ್ಬಂದಿ ಬಾರದೆ ಇರುವುದಕ್ಕೆ ಕಾರಣ ಕೇಳಿದರು. ಕರೊನಾ ವಿಷಯದಲ್ಲಿ ಗ್ರಾಪಂನ ಯಾವೊಬ್ಬ ಸಿಬ್ಬಂದಿ ನಿರ್ಲಕ್ಷೃ ತೋರದಿರಿ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವಿನಾಕಾರಣ ರಜೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ತಾ.ಪಂ. ಇಒ ಭಾರತಿ ಚಲುವಯ್ಯ, ಗ್ರಾಪಂ ಅಧ್ಯಕ್ಷೆ ಲಲಿತಾ ಲಮಾಣಿ, ಪಿಡಿಒ ಎಸ್.ಜೆ. ಉದಯಕುಮಾರ ಮತ್ತಿತರರು ಇದ್ದರು.
ಬ್ಯಾಂಕ್ನಲ್ಲಿ ಅವ್ಯವಸ್ಥೆ
ಗೊಳಸಂಗಿ ಗ್ರಾಮದಲ್ಲಿರುವ ಸಿಂಡಿಕೇಟ್ ಬ್ಯಾಂಕ್ನಲ್ಲಿ ಅವ್ಯವಸ್ಥೆ ನಿತ್ಯ ತಾಂಡವವಾಡುತ್ತಿದೆ. ಕರೊನಾದಂಥ ಪರಿಸ್ಥಿತಿಯಲ್ಲೂ ಸರ್ವರ್ ಸಮಸ್ಯೆ ಸಾಮಾನ್ಯವಾಗಿದೆ. ಪಾಸ್ಬುಕ್ ಪ್ರಿಂಟ್ ಮಷಿನ್ ಬಂದಾಗಿದೆ. ಹೆಸರಿಗೆ ಮಾತ್ರ ಎಟಿಎಂ ಎಂಬಂತಾಗಿದೆ. ಇಲ್ಲಿನ ವ್ಯವಸ್ಥಾಪಕರಿಗೆ ಕನ್ನಡ ಓದು-ಬರಹ ಬಾರದು. ಗ್ರಾಹಕರೊಂದಿಗಿನ ಒಡನಾಟವೂ ಸರಿಯಿಲ್ಲ ಎಂದು ಸಿದ್ದು ಕೊಳಗೇರಿ, ರಾವುತ ಸೀಮಿಕೇರಿ, ಈರಣ್ಣ ಮಮ್ಮದಕೋಟಿ ಮತ್ತಿತರರು ಹೇಳುತ್ತಾರೆ.