ಶಿವಮೊಗ್ಗ: ನರೇಗಾ ಕಾಮಗಾರಿ ಸ್ಥಳಕ್ಕೆ ಜನಪ್ರತಿನಿಧಿಗಳು ಇಲ್ಲವೇ ಅಧಿಕಾರಿಗಳು ಭೇಟಿ ನೀಡುತ್ತಿದ್ದಂತೆ ಕಾರ್ಮಿಕರು ಕೂಲಿ ಹೆಚ್ಚಿಸಿ, ಬಾಕಿ ವೇತನ ಪಾವತಿ ಸೇರಿ ಇತರ ಸಮಸ್ಯೆ ಪರಿಹರಿಸುವಂತೆ ಸಹಜವಾಗಿ ಮನವಿ ಮಾಡುತ್ತಾರೆ. ಆದರಿಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರೇ ಖುದ್ದಾಗಿ ನರೇಗಾ ಕಾಮಗಾರಿ ಸ್ಥಳಕ್ಕೆ ಹೋದಾಗ “ಮದುವೆಗೆ ಹೋಗ್ಬೇಕು ಪಾಸ್ ಕೊಡ್ಸಿ ಸಾರ್..!’ ಎಂದು ಮಹಿಳೆಯರಿಬ್ಬರು ದುಂಬಾಲು ಬಿದ್ದದ್ದನ್ನು ಕಂಡ ಸಚಿವರೇ ಒಂದು ಕ್ಷಣ ಅವಕ್ಕಾದರು.
ಜಿಲ್ಲೆಯ ಗಡಿಗ್ರಾಮ ಹಾಡೋನಹಳ್ಳಿ ಗ್ರಾಪಂ ವ್ಯಾಪ್ತಿಯ ಮಡಿಕೆ ಚೀಲೂರಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿಯ ಕಾಮಗಾರಿ ವೀಕ್ಷಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಗುರುವಾರ ಭೇಟಿ ನೀಡಿದ್ದರು. ಆ ವೇಳೆ ಅಗತ್ಯ ಸೌಲಭ್ಯದ ಬಗ್ಗೆ ಏನಾದರೂ ಬೇಡಿಕೆ ಬರಬಹುದೆಂದು ನಿರೀಕ್ಷೆ ಮಾಡಿದ್ದ ಸಚಿವರು, ಮಹಿಳಾ ಕಾರ್ಮಿಕರಿಬ್ಬರ ಡಿಮಾಂಡ್ಗೆ ನೋ ಅಂದುಬಿಟ್ಟರು. ಹಾಗೇ ಬುದ್ಧಿ ಮಾತೂ ಹೇಳಿದರು. ಆ ಕಾಮಿರ್ಕರ ಬೇಡಿಕೆಯಾದರೂ ಏನು ಗೊತ್ತಾ?
ಇದನ್ನೂ ಓದಿ ಮುಂಬೈ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕರೊನಾ ಸೋಂಕಿತರಿಗೆ ಚಿಕಿತ್ಸೆ
“ಹರಿಹರ ತಾಲೂಕಿನ ಶಿವನಹಳ್ಳಿಯಲ್ಲಿ ಮೇ 14ರಂದು ಬಂಧುಗಳ ಮದುವೆ ಇದೆ. ಅಲ್ಲಿಗೆ ಹೋಗಲೇಬೇಕು. ದಯವಿಟ್ಟು ಮದುವೆಗೆ ಹೋಗಲು ಪಾಸ್ ಕೊಡ್ಸಿ ಸಾರ್…’ ಎಂದು ನಾಗಮ್ಮ ಎಂಬಾಕೆ ಬೇಡಿಕೆ ಇಟ್ಟರು. ಮಾಡಿದರು. ಇದರ ಬೆನ್ನಲ್ಲೇ “ಮೇ 20ರಂದು ದಾವಣಗೆರೆ ಜಿಲ್ಲೆ ಕತ್ತಲಗೆರೆಯಲ್ಲಿ ಸಂಬಂಧಿಕರ ಮದುವೆ ಇದೆ. ಹೋಗಲು ನನಗೂ ಅವಕಾಶ ನೀಡಿ..’ ಎಂದು ಸಚಿವರಿಗೆ ಕಮಲಮ್ಮ ಮನವಿ ಮಾಡಿದರು.
ಮಹಿಳಾ ಕಾರ್ಮಿಕರ ಬೇಡಿಕೆಯನ್ನು ತಿರಸ್ಕರಿಸಿದ ಸಚಿವರು, ದಾವಣಗೆರೆ ಜಿಲ್ಲೆಯಲ್ಲಿ ಪರಿಸ್ಥಿತಿ ಸರಿಯಿಲ್ಲ. ಬದುಕು ಮುಖ್ಯ. ಅಲ್ಲಿಗೆ ಹೋಗಿ ಏನಾದರೂ ವ್ಯತ್ಯಾಸವಾದರೆ ಕಷ್ಟ. ಕರೊನಾದಂತಹ ಭೀತಿ ವ್ಯಾಪಕವಾಗಿದೆ. ಮೊದಲು ನಿಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವತ್ತ ಗಮನಹರಿಸಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ ತಟ್ಟೆ ತುಂಬಾ ಇದ್ದ ತಿಂಡಿ ಒಂದೇ ನಿಮಿಷದಲ್ಲಿ ಖಾಲಿ ಮಾಡಿದ್ರು ಸಚಿನ್ !