ಶಿವಮೊಗ್ಗ: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಅಮಾನವೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಣಿಪುರದಲ್ಲಿ ಕುಕ್ಕಿ ಸಮುದಾಯದ ಮಹಿಳೆಯರ ಮೇಲೆ ನಡೆದ ದುಷ್ಕೃತ್ಯ ಇಡೀ ಮಾನವ ಕುಲ ತಲೆ ತಗ್ಗಿಸುವಂಥದ್ದು. ಮಣಿಪುರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ. ಕೇಂದ್ರ ಸರ್ಕಾರ ಮಹಿಳಾ ವಿರೋಧಿ ಎಂದು ದೂರಿದರು.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು ದೇಶದ ಮಾಜಿ ಸೈನಿಕರೊಬ್ಬರ ಪತ್ನಿ. ದೇಶ ರಕ್ಷಣೆ ಮಾಡಿದವರ ಪತ್ನಿಗೆ ರಕ್ಷಣೆ ಕೊಡಲು ಆಗದಂತಹ ಪರಿಸ್ಥಿತಿ ಬಂದಿರುವುದು ಅವಮಾನಕರ. ಈ ಕೂಡಲೇ ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು. ರಾಷ್ಟ್ರಪತಿ ಸರ್ಕಾರ ಹೇರಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬಲ್ಕಿಷ್ ಬಾನು, ವಿಜಯಲಕ್ಷ್ಮೀ ಪಾಟೀಲ್, ಸ್ಟೆಲ್ಲಾ ಮಾರ್ಟಿನ್, ವನಮಾಲಾ, ಅರ್ಚನಾ ನಿರಂಜನ, ಚಂದ್ರಿಕಾ, ಶಮೀಮ್ ಬಾನು, ಸುವರ್ಣಾ ನಾಗರಾಜ್ ಇತರರಿದ್ದರು.