More

    ಆಶ್ರಮ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

    ಮೈಸೂರು: ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವ ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಆಗ್ರಹಿಸಿದೆ.


    ರಾಜ್ಯದಲ್ಲಿ 116 ಆಶ್ರಮ ಶಾಲೆಗಳಿದ್ದು, ಇವುಗಳಲ್ಲಿ ಅರಣ್ಯ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಬೆಟ್ಟಕುರುಬ, ಯರವ, ಸೋಲಿಗ, ಹಕ್ಕಿಪಿಕ್ಕಿ, ಡೋಂಗ್ರಿ ಗೆರಾಸಿಯಾ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ. ಈ ಕಾರಣ ಇವರಲ್ಲಿ ಅನೇಕರು ಶಿಕ್ಷಣ ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ ಎಂದು ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಶೈಲೇಂದ್ರಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.


    ಜಿಲ್ಲಾ ವ್ಯಾಪ್ತಿಯ ಎಚ್.ಡಿ. ಕೋಟೆಯಲ್ಲಿ 10, ಹುಣಸೂರು ತಾಲೂಕಿನಲ್ಲಿ 6, ಪಿರಿಯಾಪಟ್ಟಣ ತಾಲೂಕಿನಲ್ಲಿ 3, ನಂಜನಗೂಡು ತಾಲೂಕಿನಲ್ಲಿ 10 ಆಶ್ರಮ ಶಾಲೆಗಳಿವೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅಂದಾಜು 2,100ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ಇದೇ ವೇಳೆ, 2005 ರಿಂದ 2024 ರ ನಡುವೆ ಈ ಸಮುದಾಯದ 3,420 ಮಕ್ಕಳು ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


    ಈ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸದಿರುವುದು, ಕನಿಷ್ಠ ದ್ವಿತೀಯ ಪಿಯುಸಿ ತನಕ ಉಚಿತ, ಕಡ್ಡಾಯ ಶಿಕ್ಷಣ ನೀಡುವ ಸೌಲಭ್ಯವನ್ನು ಈ ಆಶ್ರಮದ ಶಾಲೆಗಳಲ್ಲಿ ಒದಗಿಸದಿರುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ, ಜಿಪಂ ಸಿಇಒ, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.


    ಈ ಶಾಲೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಶಿಕ್ಷಕರನ್ನು ತಾಲೂಕುವಾರು ಬದಲಾವಣೆ ಮಾಡಬೇಕು. ಗುಣಮಟ್ಟ ಕಾಯ್ದುಕೊಳ್ಳಲು ಟಿಇಟಿ ಉತ್ತೀರ್ಣರಾದ ಶಿಕ್ಷಕರನ್ನೇ ನೇಮಿಸಬೇಕು.

    ಪ್ರಸ್ತಕ ಸಾಲಿನಿಂದಲೇ 1ರಿಂದ 7 ತರಗತಿಯ ವರೆಗೆ ದಾಖಲಾಗುವ ಮಕ್ಕಳನ್ನು ತಾಲೂಕುವಾರು ಆಶ್ರಮ ಶಾಲೆಗಳಿಗೆ ದಾಖಲಾತಿ ಮಾಡಬೇಕು. 8ನೇ ತರಗತಿ ಉತ್ತೀರ್ಣರಾದ ಎಲ್ಲ ಮಕ್ಕಳನ್ನು ಒಂದು ಕಡೆ ಸೇರಿಸಿ ವಿಷಯವಾರು ತರಗತಿ ನಡೆಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts