ಹೊಸಪೇಟೆ:ವಿಜಯನಗರ ಕ್ಷೇತ್ರದ ಸಂಪೂರ್ಣ ಸ್ವಚ್ಛತೆ ಜಾಗೃತಿಗೆ ನಗರದಲ್ಲಿ ಯುವಧ್ವನಿ ಯುವಜನರ ಒಕ್ಕೂಟ ಮಂಗಳವಾರ ಜಾಗೃತಿ ಅಭಿಯಾನ ನಡೆಸಿತು.
ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಅಭಿಯಾನ ಆರಂಭಿಸಿ ತಾಲೂಕು ಕಚೇರಿ ಮತ್ತು ನಗರಸಭೆಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು. ಒಕ್ಕೂಟದ ಸದಸ್ಯ ಶಿವು ಮಾತನಾಡಿ, ಐತಿಹಾಸಿಕ ತಾಣ ಹಂಪಿ ಹಾಗೂ ಹೊಸಪೇಟೆ ನಗರದಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕಸ ಮುಕ್ತ ಸಮಾಜದೆಡೆ ನಮ್ಮ ನಡೆ ಘೋಷವಾಕ್ಯದಡಿ ಒಕ್ಕೂಟ ನಗರ, ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಕೆಲಸಕ್ಕೆ ಬಾರದ ವಸ್ತುಗಳೆಂದು ರಸ್ತೆಗೆ ಸುರಿಯಬಾರದು. ಕಸದಲ್ಲೂ ರಸ ಮಾಡುವ ಬಗ್ಗೆ ತಿಳಿದುಕೊಳ್ಳಬೇಕು. ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಹಾಕಿ ಸಮಾಜ ಮತ್ತು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು. ಒಕ್ಕೂಟದ ಮುಖಂಡರಾದ ನಾಗೇಶ, ನಸ್ರೀನ್, ಜೈನಶ್ರೀ, ಅಶ್ವಿನಿ ಇತರರು ಭಾಗವಹಿಸಿದ್ದರು.