ವಿಜಯಪುರ: ಕಸ ವಿಂಗಡಣೆ ಮಾಡುವ ಯಂತ್ರದಲ್ಲಿ ಸಿಲುಕಿ ಪೌರಕಾರ್ಮಿಕರಿಬ್ಬರು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂಡಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ಕಸ ವಿಲೇವಾರಿ ಘಟಕದಲ್ಲಿ ನಡೆದಿದೆ.
ಸ್ಥಳೀಯ ಝಂಡಾಕಟ್ಟೆ ನಿವಾಸಿ ಅಯ್ಯೂಬ್ ಶಂಶುದ್ದೀನ ಶೇಖ್ (55) ಹಾಗೂ ರಹೀಂ ನಗರದ ನಿವಾಸಿ ರಫೀಕ್ ಮಹಿಬೂಬ ಇಲಕಲ್ಲ (41) ಮೃತ ದುರ್ದೈವಿಗಳು.
ಘಟನೆ ವಿವರ:
ಕಸ ವಿಲೇವಾರಿ ಹಾಗೂ ವಿಂಗಡಣೆ ಮಾಡಿ ಸ್ವಚ್ಛಗೊಳಿಸುವ ಹೈಡ್ರೋಲಿಕ್ ಯಂತ್ರವನ್ನು ಅಯ್ಯೂಬ್ ಚಲಾಯಿಸುತ್ತಿದ್ದನು. ಆಪರೇಟರ್ ಎಂದೇ ಈತ ನೇಮಕಗೊಂಡಿದ್ದನು. ಇಂದು ಏಕಾಏಕಿ ಯಂತ್ರ ಸ್ಥಗಿತಗೊಂಡಿದ್ದು, ರಿಪೇರಿಗೆ ಮುಂದಾಗಿದ್ದನು. ಈತನ ಜೊತೆಗೆ ರಫೀಕ್ ಸಹ ಇದ್ದು, ಯಂತ್ರದ ಮುಂಭಾಗದಲ್ಲಿ ತಲೆ ಕೆಳಗೆ ಮಾಡಿ ವೈಯರ್ ಸರಿಪಡಿಸುತ್ತಿರುವಾಗ ಮೇಲಿನ ಭಾಗ ಏಕಾಏಕಿ ಕುಸಿದು ಬೆನ್ನ ಮೇಲೆ ಬಿದ್ದಿದೆ. ಹೀಗಾಗಿ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಭೇಟಿ:
ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿ ವಿಜಯಕುಮಾರ ಮೆಕ್ಕಳಕಿ, ಗೋಳಗುಮ್ಮಟ ಠಾಣೆ ಸಿಪಿಐ ರಮೇಶ ಅವಜಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣಕ್ಕೆ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. ಅಲ್ಲದೇ, ರಿಪೇರಿಗೆ ಮುಂದಾಗುವ ಮೊದಲು ಸಂಬಂಧಿಸಿದ ಮೇಲಾಧಿಕಾರಿಗೆ ತಿಳಿಸಿದ್ದರೆ ಸೂಕ್ತ ಮುಂಜಾಗೃತೆ ಕೈಗೊಳ್ಳಬಹುದಾಗಿತ್ತು ಎಂಬುದು ಕೆಲವರ ಅಭಿಪ್ರಾಯ.
ಇನ್ನೂ ಕೆಲವರು ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ. ಏನಾದರೂ ಮಾಡಿ ಯಂತ್ರ ರಿಪೇರಿಗೊಳಿಸಿ ಕೆಲಸ ಆರಂಭಿಸಬೇಕೆಂಬ ಒತ್ತಡದಿಂದ ಪೌರಕಾರ್ಮಿಕರು ತಾವೇ ಖುದ್ದಾಗಿ ರಿಪೇರಿಗೆ ಮುಂದಾಗಿದ್ದರು ಎಂಬ ಮಾತು ಕೇಳಿ ಬಂದಿದೆ. ಒಟ್ಟಿನಲ್ಲಿ ಕಸವಿಲೇವಾರಿ ಯಂತ್ರವೊಂದು ಪೌರಕಾರ್ಮಿಕರಿಬ್ಬರನ್ನು ಬಲಿ ತೆಗೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
‘ಸಲಗ’ ಚಿತ್ರಕ್ಕೆ ಜೈಕಾರ ಹಾಕಿದ ತಮಿಳುನಾಡು ಅಭಿಮಾನಿಗಳು…