ಗಂಗಾವತಿ: ಮಂಜೂರಾದ ನಿವೇಶನದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಜೈ ಭೀಮ್ ಆಟೋ ಚಾಲಕರ ಸಂಘ ಸೋಮವಾರ ದಸಂಸ (ಭೀಮವಾದ) ಹಾಗೂ ಸಮತಾ ಸೈನಿಕ ದಳದ ತಾಲೂಕು ಘಟಕದ ನೇತೃತ್ವದಲ್ಲಿ ನಗರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು. ದಸಂಸ ಸಂಘಟನಾ ಸಂಚಾಲಕ ಹುಸೇನಪ್ಪ ಹಂಚಿನಾಳ್ ಮಾತನಾಡಿ, 2003ರಲ್ಲಿ ಆಟೋ ಚಾಲಕರಿಗಾಗಿ ಸ.ನಂ.165/1ರ 4 ಎಕರೆಯಲ್ಲಿ ನಿವೇಶನ ವಿತರಿಸಿದ್ದು, ಮೂಲಸೌಕರ್ಯದ ಕೊರತೆಯಿಂದ ವಾಸಮಾಡಲಾಗುತ್ತಿಲ್ಲ.
192 ನಿವೇಶನಗಳಿದ್ದು ಚೆಕ್ಬಂದಿ ಗೊಂದಲದಿಂದ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಕಂಬ, ಸಿಸಿ ರಸ್ತೆ, ಶುದ್ಧ ಕುಡಿವ ನೀರಿನ ವ್ಯವಸ್ಥೆಯಾಗಬೇಕಿದ್ದು, ಒತ್ತುವರಿ ಜಾಗ ತೆರವುಗೊಳಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹರಿಗೆ ದೊರೆಯುತ್ತಿಲ್ಲ ಎಂದರು. ಕಂದಾಯ ಅಧಿಕಾರಿ ನಿಜಾಮುದ್ದೀನ್ ಖತೀಬ್ಗೆ ಮನವಿ ಸಲ್ಲಿಸಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಜೆ.ಶಂಕರ, ಎಚ್.ಎಸ್.ಹುಸೇನ್ಸಾಬ್, ಎಚ್.ಶಂಕರ್, ಜೆ.ಶರಣಬಸಪ್ಪ, ಶಂಕರ ಪೂಜಾರಿ, ಆಂಜನೇಯ, ಅಬ್ದುಲ್ಸಾಬ್, ರೆಹಮಾನ್ ಇತರರಿದ್ದರು.