ಗಂಗಾವತಿ: ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಪ್ರಶಿಕ್ಷಣಾರ್ಥಿಗಳ ಮೇಲಿದ್ದು, ಆತ್ಮವಿಶ್ವಾಸದಿಂದ ಸೇವೆ ಸಲ್ಲಿಸುವಂತೆ ಟಿಎಂಎಇ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಹೇಳಿದರು.
ನಗರದ ಟಿಎಂಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಲಿತಾಂಶದ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು. ಶಿಕ್ಷಕರಿಗೆ ಉತ್ತಮ ಸ್ಥಾನವಿದ್ದು, ಯಾವುದೇ ಕಾರಣಕ್ಕೂ ಜವಾಬ್ದಾರಿ ಮರೆಯದಂತೆ ಸಲಹೆ ನೀಡಿದರು.
ಮೀಡಿಯಾ ಕ್ಲಬ್ ಅಧ್ಯಕ್ಷ ನವಲಿ ರಾಮಮೂರ್ತಿ ಮಾತನಾಡಿ, ಪಾಲಕರ ಹಿತಾಸಕ್ತಿ ಅನುಗುಣ ಪ್ರಶಿಕ್ಷಣಾರ್ಥಿಗಳು ಕರ್ತವ್ಯ ನಿರ್ವಹಿಸಬೇಕಿದ್ದು, ಕುಟುಂಬ ಮತ್ತು ಕಲಿತ ಶಿಕ್ಷಣ ಸಂಸ್ಥೆಗೆ ಹೆಸರು ತರುವ ಕೆಲಸ ಮಾಡುವಂತೆ ಸಲಹೆ ನೀಡಿದರು. ವಿವಿಧ ಆಟೋಟಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಧ್ಯಾಪಕರಾದ ಕೆ.ಎಂ.ಶಿವಪ್ರಕಾಶ, ಡಾ.ಜಿ.ಎಂ.ವಿಜಯಲಕ್ಷ್ಮೀ, ಡಾ.ಡಿ.ಎಂ.ಅರುಣಕುಮಾರ, ಡಾ.ರಮೇಶ ಸಿದ್ದಪ್ಪ,ರುದ್ರಪ್ಪ ಆರಾಳ್, ಶಿವರಾಜ್ ಪಾಟೀಲ್, ಪಂಚಾಕ್ಷರಯ್ಯ ಹಿರೇಮಠ, ವಿರೂಪಾಕ್ಷಯ್ಯಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಜಯರಾಂ ಮರಡಿತೋಟ, ಪತ್ರಕರ್ತ ಗಂಗಾಲ ತಿರುಪಾಲಯ್ಯ ಇತರರಿದ್ದರು.