ಗಂಗಾವತಿ: ಗ್ರಾಮ ಸ್ವರಾಜ್ ಕನಸು ಗ್ರಾಪಂ ಸದಸ್ಯರಿಂದ ಸಾಧ್ಯವಿದ್ದು, ಪಕ್ಷಾತೀತವಾಗಿ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗ್ರಾಪಂ ಸದಸ್ಯರಿಗಾಗಿ ಶುಕ್ರವಾರ ಆಯೋಜಿಸಿದ್ದ 2ನೇ ಹಂತದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ಸೌಲಭ್ಯ ವಂಚಿತರಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದ್ದು, ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಪ್ರಾಮಾಣಿಕ ಯತ್ನಿಸಿ. ಅಧಿಕಾರಿ ವಿಕೇಂದ್ರೀಕರಣದಡಿ ಗ್ರಾಪಂಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸಾಕಷ್ಟು ಯೋಜನೆ ಮತ್ತು ಅನುದಾನವಿದೆ ಎಂದರು.
ತಾಪಂ ಇಒ ಡಾ.ಮೋಹನ್ ಮಾತನಾಡಿ, ಮೂರು ತಾಲೂಕುಗಳ ಎಲ್ಲ ಗ್ರಾಪಂ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದ್ದು, 80 ಸದಸ್ಯರಂತೆ 5 ದಿನ ತರಬೇತಿ ನೀಡಲಾಗುವುದು ಎಂದರು. ಮಲ್ಲಾಪುರ, ಮರಳಿ, ಕೇಸರಹಟ್ಟಿ, ವೆಂಕಟಗಿರಿ ಗ್ರಾಪಂ ಸದಸ್ಯರಿಗೆ ಪ್ರಮಾಣ ಪತ್ರ ಮತ್ತು ಗ್ರಾಪಂ ಕಾಯ್ದೆ ಕೈಪಿಡಿ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಯ್ಯಸ್ವಾಮಿ ಹಿರೇಮಠ, ಶೇಖರಪ್ಪ ಸಿಂಧೋಗಿ, ಮೀನಾಕ್ಷಿ, ರಮೇಶ, ತಾಪಂ ಸಹಾಯಕ ಶಿವಮೂರ್ತಿ ಕಂಪಾಪುರಮಠ, ಸಿಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಇತರರಿದ್ದರು.