ಗಂಗಾವತಿ: ಐತಿಹಾಸಿಕ ಮತ್ತು ಜೀವನಾಧಾರಿತ ಚಿತ್ರಗಳಿಂದ ಸಾಮಾಜಿಕ ಸಂದೇಶ ನೀಡಬಹುದಾಗಿದೆ. ಇಂತಹ ಚಿತ್ರಗಳಿಂದ ಸಮಾಜದ ಸ್ವಾಸ್ತ್ಯ ಕಾಪಾಡಲು ಸಾಧ್ಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ನಗರದ ಹಿರೇಜಂತಕಲ್ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಬುಧವಾರ ಶ್ರೀ ಜಗನ್ನಾಥ ದಾಸರು ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ವಾಸ್ತವಿಕತೆಯಿಂದ ಕೂಡಿದ ಕತೆಗೆ ಸರ್ವಕಾಲಿಕ ಮಾನ್ಯತೆ ದೊರೆಯಲಿದೆ. ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ದೇವಾಲಯದಲ್ಲಿ ಹಾಡುಗಳು ಮತ್ತು ಪೂಜೆಯ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೆಂಕಟರಾವ್ ರಚಿಸಿರುವ ಆನಂದಂ ಗೋವಿಂದಂ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ನಗರಸಭೆ ಸದಸ್ಯ ವಾಸು ನವಲಿ, ಮಾಜಿ ಸದಸ್ಯ ಎಸ್.ರಾಘವೇಂದ್ರ ಶ್ರೇಷ್ಠಿ, ವಕೀಲರಾದ ಶರದ್ ದಂಡಿನ್, ನಾಗರಾಜ್ ಗುತ್ತೇದಾರ್, ಮುಖಂಡರಾದ ಸೈಯ್ಯದ್ ಅಲಿ, ನರಸಿಂಗರಾವ್ ಕುಲಕರ್ಣಿ, ಕಲಾವಿದರಾದ ನಾಗರಾಜ ಇಂಗಳಗಿ, ವೆಂಕಟೇಶ ಮಾಂತಾ, ಪಂಪಾಪತಿ ಇತರರಿದ್ದರು.