ಗಂಗಾವತಿ: ಜಿಲ್ಲಾಡಳಿತದ ವಿರೋಧದ ನಡುವೆಯೂ ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಭಾನುವಾರ ಜರುಗಿತು.
ಹನುಮದ್ ವ್ರತ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹನುಮ ಭಕ್ತರು ಹನುಮಮಾಲೆ ಧರಿಸುತ್ತಿದ್ದು, ಕಠಿಣ ವ್ರತದ ನಂತರ ಬೆಟ್ಟದಲ್ಲಿ ವಿಸರ್ಜಿಸಲಾಗುತ್ತಿತ್ತು. ಕರೊನಾ ಮುಂಜಾಗ್ರತೆ ಕ್ರಮ ಮತ್ತು ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಮಾಲೆ ವಿಸರ್ಜನೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಸ್ಥಳೀಯರು ಸೇರಿ ಅನ್ಯ ಜಿಲ್ಲೆಯ ಹನುಮ ಭಕ್ತರು ಬೆಳಗ್ಗೆಯಿಂದಲೇ ಬೆಟ್ಟ ಹತ್ತಿ ಅಂಜನಾದ್ರಿ ದರುಶನ ಪಡೆದ ನಂತರ ಮಾಲೆ ವಿಸರ್ಜಿಸಿದರು. ವಿಹಿಂಪ ಮತ್ತು ಭಜರಂಗ ದಳದ ಕಾರ್ಯಕರ್ತರು ಮಾಲೆ ವಿಸರ್ಜನೆಗೆ ನೆರವಾದರು. ಇಲಾಖೆಯಿಂದಲೇ ಪವನಮಾನ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು.
ವಿಶೇಷ ಪೂಜೆ: ಹನುಮದ್ ವ್ರತ ಹಿನ್ನೆಲೆಯಲ್ಲಿ ದೇವಾಲಯವನ್ನು ಹೂವುಗಳಿಂದ ಅಲಂಕರಿಸಿದ್ದು, ವಿಶೇಷ ಪೂಜೆ, ಅಭಿಷೇಕ, ಅಂಜನಾದ್ರಿ ಪರಿಕ್ರಮ, ಪಲ್ಲಕಿ ಸೇವೆ, ಮಹಾಮಂಗಳಾರತಿ, ಹನುಮಾನ ಚಾಲೀಸ್ ಪಾರಾಯಣ ಮತ್ತು ಸಂಕೀರ್ತನೆ ಹಮ್ಮಿಕೊಳ್ಳಲಾಗಿತ್ತು. ಕರೊನಾ ಮುಂಜಾಗ್ರತೆ ಕ್ರಮಗಳ ಬಗ್ಗೆ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಭಕ್ತರು ಸಹಕರಿಸಲಿಲ್ಲ. ಭಕ್ತರಿಗಾಗಿ ಚಿಕ್ಕರಾಂಪುರದ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಪರಣ್ಣ ಮುನವಳ್ಳಿ ಭೋಜನ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಭಜರಂಗ ದಳ ಉತ್ತರ ಕರ್ನಾಟಕ ಸಹ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ಸಂಯೋಜಕ ಪುಂಡಲೀಕ, ವಿಹಿಂಪ ಪ್ರತಿನಿಧಿಗಳಾದ ವಿನಯ್ ಪಾಟೀಲ್,ದೊಡ್ಡಯ್ಯಸ್ವಾಮಿ,ನರಸಿಂಹಮೂರ್ತಿ, ತಿಪ್ಪೇಸ್ವಾಮಿ ಇತರರಿದ್ದರು.