ಗಂಗಾವತಿ: ನರ ಭಕ್ಷಕ ಚಿರತೆ ದಾಳಿ ನಡೆಸಿದ ತಾಲೂಕಿನ ವಿರುಪಾಪುರಗಡ್ಡಿಯ ಹರಿಹರ ರಾಘವೇಂದ್ರ ಕಾಲನಿಗೆ (ಬಿಂಚಿಕುಟ್ರಿ) ಡಿಎ್ಒ ಡಾ.ಹರ್ಷಾಭಾನು ಮತ್ತು ಎಸಿ ನಾರಾಯಣರೆಡ್ಡಿ ಕನಕರೆಡ್ಡಿ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.
ವಾಲಿಕಿಲ್ಲಾ ಮ್ಯಾಗೋಟದಲ್ಲಿ ಅಡುಗೆದಾರ ಚಿರತೆಗೆ ಬಲಿಯಾದ ನಂತರ ಚಿರತೆ ಚಲನವಲನದ ಬಗ್ಗೆ ಅರಣ್ಯಾಧಿಕಾರಿಗಳ ತಂಡ ನಿಗಾವಹಿಸಿದ್ದಾರೆ. ಕಾರ್ಯಾಚರಣೆ ನಡುವೆಯೂ ಗಡ್ಡಿ ಬಳಿ ವಿರುಪಣ್ಣ ಎಂಬುವರ ಕರುವಿನ ಮೇಲೆ ಶುಕ್ರವಾರ ಸಂಜೆ ದಾಳಿ ನಡೆಸಿತ್ತು. ಜಾನುವಾರುಗಳನ್ನು ಸಂಜೆಯಾಗುತ್ತಿದ್ದಂತೆ ಸುರಕ್ಷತೆ ಸ್ಥಳದಲ್ಲಿ ಕಟ್ಟುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ಆನೆಗೊಂದಿ ಭಾಗಕ್ಕಾಗಿ ಹೆಚ್ಚುವರಿ ಬೋನುಗಳನ್ನು ತಯಾರಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಲಾಗಿದ್ದು, ಚಿರತೆ ಸೆರೆಹಿಡಿಸಲು ಕ್ರಮ ಕೈಗೊಳ್ಳಲಾಗಿದೆ. ಡ್ರೋನ್ ಕ್ಯಾಮರಾ ಕಣ್ಗಾವಲು ಜತೆಗೆ 8 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಜನವಸತಿ ನಿರ್ಮಾಣವಾಗಿದ್ದರಿಂದ ವನ್ಯ ಪ್ರಾಣಿಗಳು ಗ್ರಾಮಕ್ಕೆ ನುಗ್ಗುತ್ತಿವೆ. ಅರಣ್ಯ ರಕ್ಷಣೆ ವಿಚಾರದಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಜಂಟಿ ಸರ್ವೇ ಕೈಗೊಳ್ಳಲಾಗುವುದು ಎಂದು ಡಿಎ್ಒ ಡಾ.ಹರ್ಷಾಭಾನು ತಿಳಿಸಿದರು. ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ ಮೇಟಿ, ರಕ್ಷಕ ಎಂ.ಶ್ರೀನಿವಾಸ, ಮಾರುತಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರರಿದ್ದರು.