ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ
ಗಂಗಾವತಿ: ಅರಣ್ಯ ಪ್ರದೇಶದಲ್ಲಿ ಕುಡಿವ ನೀರಿನ ಬವಣೆ ತೀರಿಸಲು ಸೋಲಾರ್ ಪ್ರೇರಿತ ಸ್ವಯಂ ಚಾಲಿತ ಪಂಪ್ಸೆಟ್ ಬಳಕೆಗೆ ನಿರ್ಧರಿಸಿದ್ದು, ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬೇಸಿಗೆ ಅವಧಿಯಲ್ಲಿ ರಾಜ್ಯದ ಬಹುತೇಕ ಅರಣ್ಯ ಪ್ರದೇಶದಲ್ಲಿ ನೀರಿನ ಅಭಾವವಿದ್ದು, ಪ್ರಾಣಿ, ಪಶು, ಪಕ್ಷಿಗಳಿಗೆ ತೊಂದರೆಯಾಗಿದೆ. ಸೋಲಾರ ಪ್ರೇರಿತ ಸ್ವಯಂ ಚಾಲಿತ ಪಂಪ್ಸೆಟ್ಗಳ ಅಳವಡಿಸುವ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಲು ನಿರ್ಧರಿಸಿದೆ.
ಸನಿಹದಲ್ಲಿ ಕರಡಿ ಧಾಮವಿದ್ದು, ಇನ್ನೊಂದು ಧಾಮ ನಿರ್ಮಾಣ ಅಸಾಧ್ಯ. ಜಿಂಕೆಗಳಿಗಾಗಿ ಮಾತ್ರ ವನ ನಿರ್ಮಿಸುವ ಯೋಚನೆಯಿಲ್ಲ. ಬದಲಿಗೆ ಈ ಭಾಗದಲ್ಲಿ ಹೆಚ್ಚಿರುವ ಪ್ರಾಣಿಗಳ ಧಾಮ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.