ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಶಿಕಾ ಸೋಮವಾರ ಭೇಟಿ ನೀಡಿ ದರ್ಶನ ಪಡೆದರು.
ಪೊಲೀಸ್ ಬೆಂಗಾವಲಿನಲ್ಲಿ ಬೆಟ್ಟಕ್ಕೆ ಬಂದ ಯದುವೀರ ಕುಟುಂಬ, ದೇವಾಲಯದ ಸಿಬ್ಬಂದಿ ಪರಿಚಯಮಾಡಿಕೊಂಡು 575 ಮೆಟ್ಟಿಲುಗಳನ್ನು ಹತ್ತಿದರು. ದೇವಾಲಯದಲ್ಲಿ ಸಂಕಲ್ಪ ಕೈಗೊಂಡ ನಂತರ ವಿಶೇಷ ಪೂಜೆ ಸಲ್ಲಿಸಿದರು. ಕೆಲಕಾಲ ಸ್ತೋತ್ರ ಪಠಣ ಮಾಡಿ, ಬೆಟ್ಟದ ಮೇಲಿನಿಂದ ಪರಿಸರವನ್ನು ಅಸ್ವಾದಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್, ಅಂಜನಾದ್ರಿ ಬೆಟ್ಚಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿದ್ದು, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರವಾಗಿದೆ. ರಾಮಾಯಣದಲ್ಲಿನ ಉಲ್ಲೇಖದಂತೆ ರಾಜ್ಯದ ಅಂಜನಾದ್ರಿ ಬೆಟ್ಟವೇ ಹನುಮ ಜನಿಸಿದ ಸ್ಥಳವಾಗಿದ್ದು, ಭಕ್ತಿ ಶ್ರದ್ಧಾಕೇಂದ್ರವಾಗಿದೆ. ನಮಗಂತೂ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ. ಬೇರೆಯವರು ಏನೇ ಪ್ರತಿಪಾದಿಸಿದರೂ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು. ರಾಜಮನೆತನದ ದಂಪತಿಯೊಂದಿಗೆ ಪ್ರವಾಸಿಗರು ಸೆಲ್ಫಿ ತೆಗೆಸಿಕೊಳ್ಳಲು ಮುಂದಾದರೆ, ಸ್ಥಳೀಯ ಪೊಲೀಸರು ಗ್ರೂಪ್ ೆಟೋ ಕ್ಲಿಕ್ಕಿಸಿಕೊಂಡರು.