More

    ಗ್ಯಾಂಗ್ ರೇಪ್ ಪ್ರಕರಣ ಸಿಬಿಐಗೊಪ್ಪಿಸಿ: ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹ

    ಹಾವೇರಿ: ಹಾನಗಲ್ಲ ಗ್ಯಾಂಗ್​ರೇಪ್ ಪ್ರಕರಣವನ್ನು ರಾಜ್ಯ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವ ಬಿ.ಸಿ. ಪಾಟೀಲ, ಕೂಡಲೇ ಸಿಬಿಐಗೆ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

    ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ರಾಜಿ ಮಾಡಿ ಮುಚ್ಚಿಹಾಕಲು ಪೊಲೀಸರು ಮುಂದಾಗಿದ್ದಾರೆ. ಹಾನಗಲ್ಲ ಪೊಲೀಸರ ಮೇಲೆ ನಂಬಿಕೆ ಇಲ್ಲವಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗ್ಯಾಂಗ್​ರೇಪ್ ಕುರಿತು ಸಂತ್ರಸ್ತ ಮಹಿಳೆಯೇ ಹೇಳಿಕೆ ನೀಡಿದ್ದಾಳೆ. ನೈತಿಕ ಪೊಲೀಸ್​ಗಿರಿ ಬಗ್ಗೆ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಈ ಪ್ರಕರಣದ ಬಗ್ಗೆ ಬಾಯಿ ಬಿಡುತ್ತಿಲ್ಲ. ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ನಡೆದರೂ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿ ಗಳನ್ನು ಇನ್ನೂ ಬಂಧಿಸಿಲ್ಲ. ರಾಜ್ಯದಲ್ಲಿ ಅದಕ್ಷ ಸರ್ಕಾರವಿದ್ದು, ಆರೋಪಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮಹಿಳೆಯರ ದೌರ್ಜನ್ಯ ಈ ಸರ್ಕಾರದ 6ನೇ ಗ್ಯಾರಂಟಿ ಸ್ಲೋಗನ್ ಆಗಲಿದೆ ಎಂದು ವಾಗ್ದಾಳಿ ನಡೆಸಿದರು.

    ಹಾನಗಲ್ಲ ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಇಂತಹ ನಾಲ್ಕು ಪ್ರಕರಣ ದಾಖಲಾಗಿವೆ. ಮಲ್ಲಿಗಾರ್ ಒಣಿಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಮಕರವಳ್ಳಿ ಗ್ರಾಮದ ಯುವತಿ ಬಟ್ಟೆ ಖರೀದಿ ಮಾಡಲು ಹೋದಾಗ ಟ್ರಯಲ್ ರೂಮಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ಆಕೆಯನ್ನು ಬ್ಲಾ್ಯಕ್​ವೆುೕಲ್ ಮಾಡುವ ಪ್ರಯತ್ನ ನಡೆದಿತ್ತು. ಎರಡು ದಿನಗಳ ಹಿಂದೆ ಮತ್ತೊಂದು ಕಿಡ್ನಾಪ್ ಪ್ರಕರಣವಾಗಿದ್ದರೂ ಶುಕ್ರವಾರ ರಾತ್ರಿ ಕೇಸ್ ದಾಖಲಿಸಿಕೊಂಡಿದ್ದಾರೆ. ತಕ್ಷಣ ಹಾನಗಲ್ಲ ಸಿಪಿಐ ಹಾಗೂ ಪಿಎಸ್​ಐನ್ನು ಸಸ್ಪೆಂಡ್ ಮಾಡಬೇಕು ಎಂದರು.

    ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಪಿಎಫ್​ಐ ಸಂಘಟನೆಯೊಂದಿಗೆ ಲಿಂಕ್ ಇದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಗಾಂಜಾ ಸಿಗುತ್ತಿದೆ. ಅಕ್ರಮ ಮದ್ಯ, ಜೂಜು ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮ ದಂಧೆಯಿಂದಲೇ ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹಿಸುತ್ತಿರುವ ಶಂಕೆ ಮೂಡುತ್ತಿದೆ ಎಂದು ಆರೋಪಿಸಿದರು.

    ಒಬ್ಬ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ಆಗಿದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲೀ, ಮಹಿಳಾ ಕಲ್ಯಾಣ ಸಚಿವೆಯಾಗಲೀ ಸಾಂತ್ವನ ಹೇಳಲು ಬಂದಿಲ್ಲ. ಸ್ಥಳೀಯ ಶಾಸಕರೂ ಮೌನ ವಹಿಸಿದ್ದಾರೆ. ಇದನ್ನು ನೋಡಿದರೆ ಆರೋಪಿಗಳಿಗೆ ಇವರ ರಕ್ಷಣೆ ಇದ್ದಂತೆ ಕಾಣುತ್ತಿದೆ. ದೇಶ ಹಾಳಾದರೂ ಪರವಾಗಿಲ್ಲ, ಕಾಂಗ್ರೆಸ್​ನವರಿಗೆ ಓಟ್ ಬ್ಯಾಂಕ್ ಮುಖ್ಯ ಎಂದು ಟೀಕಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಕಿರಣ ಕೋಣನವರ ಸುದ್ದಿಗೋಷ್ಠಿಯಲ್ಲಿದ್ದರು.

    ಬಿಜೆಪಿಯಿಂದ ನೆರವು

    ಇಲ್ಲಿಯ ಸ್ವಾಧಾರ ಸಾಂತ್ವನ ಕೇಂದ್ರದಲ್ಲಿರುವ ಗ್ಯಾಂಗ್ ರೇಪ್ ಸಂತ್ರಸ್ತೆಯನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದ ಬಿಜೆಪಿ ತಂಡದವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಮಯದಲ್ಲಿ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಬಗ್ಗೆ ಸಂತ್ರಸ್ತೆ ಅಳಲು ತೋಡಿಕೊಂಡಳು. ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಬಿಜೆಪಿ ಮುಖಂಡರು ಸಂತ್ರಸ್ತೆಗೆ ಧೈರ್ಯ ತುಂಬಿ, ಪಕ್ಷದಿಂದ 25 ಸಾವಿರ ರೂ. ಸಹಾಯಧನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts