ತುಮಕೂರು: ನಿನ್ನೆ(ಶುಕ್ರವಾರ) ಬಿಡುಗಡೆಯಾದ ನಟ ಡಾ. ಪುನೀತ್ ರಾಜ್ಕುಮಾರ್ ಅಭಿನಯದ ‘ಗಂಧದಗುಡಿ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅಪ್ಪುವನ್ನು ಕಣ್ತುಂಬಿಕೊಳ್ಳಲು ಥಿಯೇಟರ್ ಬಳಿ ಸಹಸ್ರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಟಿಕೆಟ್ಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ, ಇಡೀ ಸಿನಿಮಾ ಹಾಲ್ ಬುಕ್ ಮಾಡಿ ಅಪ್ಪು ಫ್ಯಾನ್ಸ್ಗೆ ಉಚಿತವಾಗಿ ‘ಗಂಧದಗುಡಿ’ ಸಿನಿಮಾ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ(ಅ.29) ವರ್ಷ. ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆ ಮಾಜಿ ಸಚಿವ ಸೊಗಡು ಶಿವಣ್ಣ ಪುತ್ರ ಕುಮಾರಸ್ವಾಮಿ ಎಂಬುವವರು ತುಮಕೂರಿನ ಎಸ್.ಮಾಲ್ನಲ್ಲಿರುವ ಐನಾಕ್ಸ್ನ ಒಂದು ಸಿನಿಮಾ ಹಾಲ್ ಅನ್ನೇ ಬುಕ್ ಮಾಡಿದ್ದಾರೆ. 250 ಅಭಿಮಾನಿಗಳಿಗೆ ಉಚಿತ ಟಿಕೆಟ್ ವಿತರಿಸಿದ ಕುಮಾರಸ್ವಾಮಿ, ಸಿನಿಮಾ ವೀಕ್ಷಿಸಿದ ಬಳಿಕ ಪ್ರತಿಯೊಬ್ಬರಿಗೂ ಸಸಿ ವಿತರಿಸಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ.
ಸೊಗಡು ಶಿವಣ್ಣರ ಪುತ್ರ ಕುಮಾರಸ್ವಾಮಿಗೆ ಅಪ್ಪು ಅಂದ್ರೆ ಪ್ರೀತಿ. ಪುನೀತ್ರ ಅಪ್ಪಟ ಅಭಿಮಾನಿಯಾಗಿರೋ ಕುಮಾರಸ್ವಾಮಿ, ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಅರಣ್ಯ ಉಳಿಸುವ ಸಂದೇಶವಿದೆ. ಹಾಗಾಗಿ ಅವರ ಅಭಿಮಾನಿಗಳೂ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಮನವಿ ಮಾಡುತ್ತಾ ಸಸಿಗಳನ್ನು ವಿತರಿಸಿದರು. ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ರಾಜ್ಯಾದ್ಯಂತ ಹಲವೆಡೆ ಅಭಿಮಾನಿಗಳಿಂದ ಅನ್ನದಾನ ನಡೆಯುತ್ತಿದೆ.
ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ… ಕನ್ನಡದಲ್ಲೇ ಪುನೀತ್ರನ್ನ ನೆನೆದ ಅರವಿಂದ್ ಕೇಜ್ರಿವಾಲ್