ಸಿರವಾರ: ತಾಲೂಕಿನ ಗಣದಿನ್ನಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾಏಸ್ ಶನಿವಾರ ಮಧ್ಯಾಹ್ನ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಗಣದಿನ್ನಿ ಹಳ್ಳದ ಹೂಳು ತೆಗೆಯುವ ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾಏಸ್ ಪಲ್ಟಿಯಾಗಿದೆ. 30ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯಗಳಾಗಿವೆ. ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಕಳುಹಿಸಲಾಗಿದೆ.
ಗೂಡ್ಸ್ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯದಂತೆ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಗ್ರಾಪಂ ಕೆಲಸಕ್ಕೆ ಗೂಡ್ಸ್ ವಾಹನದಲ್ಲಿ ಕಾರ್ಮಿಕರನ್ನು ಕುರಿಗಳಂತೆ ತುಂಬಿಕೊಂಡು ಹೋಗಿರುವುದು ಪಿಡಿಒ ನಿರ್ಲಕ್ಷ್ಯ, ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ.
ದೈಹಿಕ ಅಂತರ: ಕರೊನಾ ಲಾಕ್ಡೌನ್ ಹಿನ್ನೆಲೆ ವ್ಯಕ್ತಿಯಿಂದ ವ್ಯಕ್ತಿಗೆ ದೈಹಿಕ ಅಂತರ ಕಾಪಾಡಬೇಕು ಎಂಬ ನಿಯಮ ಇದ್ದರೂ ಟಾಟಾಏಸ್ನಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯಲಾಗಿದೆ. ಗ್ರಾಮಸ್ಥರಿಗೆ ರೋಗದ ಜಾಗೃತಿ ಮೂಡಿಸುವ ಗ್ರಾಪಂ ಆಡಳಿತವೇ ನಿಯಮ ಪಾಲಿಸಿಲ್ಲ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.