ತೆಲಸಂಗ: ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ನಿಟ್ಟಿನಲ್ಲಿ ದೇಶ್ಯಾದ್ಯಂತ ಜ.15 ರಿಂದ ಫೆ.27ರ ವರೆಗೆ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದ್ದು, ಇದರ ನಿಮಿತ್ತ ಜನ ಜಾಗೃತಿ ಬೈಕ್ ರ್ಯಾಲಿ, ಶಿಸ್ತು ಬದ್ಧವಾಗಿ ನಡೆಯಬೇಕು ಎಂದು ಆರ್ಎಸ್ಎಸ್ ಮುಖಂಡ ಸಂತೋಷ ಕುಲಕರ್ಣಿ ಹೇಳಿದರು.
ಗುರುವಾರ ಸಂಜೆ ಗ್ರಾಮದಲ್ಲಿ ಆರ್ಎಸ್ಎಸ್ ನಿಂದ ಜರುಗಿದ ದೇಣಿಗೆ ಸಂಗ್ರಹದ ಜನ ಜಾಗೃತಿ ಬೈಕ್ ರ್ಯಾಲಿಗೂ ಮುನ್ನ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಬೈಕ್ ರ್ಯಾಲಿಗೂ, ಸಂಘದ ರ್ಯಾಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಶಿಸ್ತು ಕಡ್ಡಾಯ.
ಬೈಕ್ ಮೇಲೆ ಇಬ್ಬರೇ ಇರಬೇಕು. ಮಾರ್ಗಸೂಚಿಯಂತೆ ಸಾಲಿನಲ್ಲಿಯೇ ಬೈಕ್ ಓಡಿಸಬೇಕು. ಹಾರ್ನ್ ಹೊಡೆಯುವಂತಿಲ್ಲ. ಇನ್ನೊಬ್ಬರಿಗೆ ನೋವಾಗುವಂತೆ ಯಾವುದೇ ಘೋಷಣೆ ಕೂಗುವಂತಿಲ್ಲ. ಜೋರಾಗಿ ರೇಸ್ ಮಾಡುವಂತಿಲ್ಲ. ದೇಶದ ಸ್ವಾಭಿಮಾನದ ಪ್ರತೀಕವಾದ ರಾಮ ಮಂದಿರ ಸರ್ವ ಜನಾಂಗದ ರಾಷ್ಟ್ರ ಮಂದಿರ ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.
ಸ್ವಯಂ ಸೇವಕರಾದ ಜಗದೀಶ ಮಠದ, ಡಾ.ಬಿ.ಎಸ್.ಕಾಮನ್, ಕೇಶವ ಉಂಡೋಡಿ, ಶ್ರೀಶೈಲ್ ಶೆಲ್ಲೆಪ್ಪಗೋಳ, ಸಿದ್ದಪ್ಪ ಕೋಡ್ನಿ, ಬಾಲಕೃಷ್ಣ
ಬಡಿಗೇರ ಹಾಗೂ ಇತರರು ಇದ್ದರು.