ಅರಕಲಗೂಡು: ಅಹಿಂಸಾತ್ಮಕ ಚಳವಳಿ ಮುಖೇನ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಗಾಂಧೀಜಿ ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎ.ಮಂಜು ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಜೀವನ ನಮಗೆ ಆದರ್ಶ ಆಗಬೇಕು. ಬೇರೆಯವರಿಗೆ ಯಾರು ಹಿಂಸೆ ನೀಡುತ್ತಾರೋ ಅವರು ತನ್ನನ್ನು ತಾನು ಹಿಂಸಿಸಿಕೊಂಡಂತಾಗುತ್ತದೆ ಎಂದು ಗಾಂಧಿ ಹೇಳಿದ್ದು ಇದರಲ್ಲಿ ಸತ್ಯಾಂಶಶವಿದೆ. ಹೀಗಾಗಿ ಯುವಕರು ಅಹಿಂಸಾ ತತ್ವವನ್ನು ಅನುಸರಿಸಬೇಕು ಎಂದು ಹೇಳಿದರು.
ಹಲವು ರಾಷ್ಟ್ರಗಳು ಯುದ್ಧದ ಮೂಲಕ ಬ್ರಿಟಿಷರನ್ನು ದೇಶದಿಂದ ಹೊರಹಾಕಿ ಸ್ವಾತಂತ್ರ್ಯ ಪಡೆದುಕೊಂಡರೆ, ಮಹಾತ್ಮ ಗಾಂಧಿ ಅವರು ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಆಯ್ಕೆ ಮಾಡಿದ್ದು ಅಹಿಂಸಾತ್ಮಕ ಹಾದಿ. ಹೋರಾಟದಿಂದ ಯಾವುದೇ ಜೀವ ಹಾನಿ ಆಗಬಾರದೆಂದು ಬಯಸಿದ್ದವರು. ಹಾಗೆಯೇ ಸ್ವಾತಂತ್ರ್ಯ ತಂದುಕೊಟ್ಟರು. ಹಾಗಾಗಿ ಅವರ ತತ್ವ-ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಜತೆಗೆ ನಾವು ಗಾಂಧೀಜಿ ಅವರ ಜೀವನ ಚರಿತ್ರೆ ಓದಬೇಕು. ಮಕ್ಕಳಿಗೂ ತಿಳಿಸಬೇಕು ಎಂದರು.