ರಾಯಚೂರು: ಹುಟ್ಟುಹಬ್ಬ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಬಹುತೇಕ ಜನರು ಜನರಿಗೆ ಮೃಷ್ಟಾನ್ನ ಭೋಜನ ಹಾಕಿ ಖುಷಿ ಪಡುವುದು ಸಹಜ. ಆದರೆ ತಾಲೂಕಿನ ಕರೆಕಲ್ ಗ್ರಾಮದ ದಂಪತಿಗಳು ತಮ್ಮ ಪುತ್ರನ ನಾಮಕರಣದ ಸಂದರ್ಭದಲ್ಲಿ ಗ್ರಾಮದ ಬಡ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಅನುಕೂಲವಾಗಲು ಉಚಿತವಾಗಿ ಸೈಕಲ್ ವಿತರಣೆ ಮಾಡಿದ್ದಾರೆ.
ತಾಲೂಕಿನ ಕರೆಕಲ್ ಗ್ರಾಮದ ದಂಪತಿಗಳಾದ ಸುರೇಶ್ ಪೊಲೀಸ್ ಪಾಟೀಲ್ ಮತ್ತು ರೇಣುಕಾ ತಮ್ಮ ಪುತ್ರನ ನಾಮಕರಣ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ 9 ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಮಾತ್ರವಿದೆ. ಪ್ರೌಢಶಾಲೆ ಕಲಿಕೆಗಾಗಿ ಗ್ರಾಮದ ವಿದ್ಯಾರ್ಥಿಗಳು ಎಂಟು ಕಿ.ಮೀ. ದೂರದಲ್ಲಿರುವ ಕಾಡ್ಲೂರು ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಹೋಗಬೇಕು. ಇದರಿಂದಾಗಿ ಗ್ರಾಮದ ಬಡ ವಿದ್ಯಾರ್ಥಿಗಳು ಕಲಿಕೆಯನ್ನು ಬಿಡುತ್ತಾರೆ.
ಇದನ್ನು ಮನಗಂಡು ಅದರಲ್ಲೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 9 ಸೈಕಲ್ಗಳನ್ನು ಉಚಿತವಾಗಿ ನೀಡುವ ಮೂಲಕ ದಂಪತಿಗಳು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಜಿ.ಪಂ. ಮಾಜಿ ಸದಸ್ಯ ಸತೀಶ, ಗ್ರಾಮದ ಮುಖಂಡರಾದ ರುದ್ರಗೌಡ ಪೊಲೀಸ್ ಪಾಟೀಲ್, ಐರೆಡ್ಡಿ ಪೊಲೀಸ್ ಪಾಟೀಲ್, ವಿರುಪಾಕ್ಷಪ್ಪ, ಅರುಣಕುಮಾರ, ರಾಜುಗೌಡ ಪಾಟೀಲ್ ಉಪಸ್ಥಿತರಿದ್ದರು.