More

    ಬಿಎಲ್ ಡಿಇ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ

    ವಿಜಯಪುರ: ಬಸವಾದಿ ಶರಣರ ಆಶಯದಂತೆ ಪ್ರಾರಂಭವಾದ ಬಿಎಲ್ಡಿಇ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

    ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸೋಮವಾರ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಆಯೋಜಿಸಿದ್ದ ಬಿಎಲ್ಡಿಇ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಬ್ರಿಟಿಷರ ಆಡಳಿತದಲ್ಲಿ ಹಿಂದುಳಿದಿದ್ದ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ 1910ರಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸ್ಥಾಪಿಸಿದ ಈ ಸಂಸ್ಥೆಯ ಅಭಿವೃದ್ಧಿಗೆ ದಾನಚಿಂತಾಮಣಿ ಬಂಗಾರಮ್ಮ ಸಜ್ಜನ, ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು, ಶಿಕ್ಷಣ ಹರಿಕಾರ ದಿ. ಬಿ.ಎಂ. ಪಾಟೀಲರ ಜೊತಗೆ ಅನೇಕ ಜನರು ಶ್ರಮಿಸಿದ್ದಾರೆ. ಈಗ ಹಾಲಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರು ಡಾ. ಹಳಕಟ್ಟಿ, ಆದಿಲ್‌ಶಾಹಿ, ಡಾ. ಎಂ.ಎಂ. ಕಲಬುರ್ಗಿ ಅವರ ಸಮಗ್ರ ಸಂಪುಟಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿರುವಂತೆ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಶಿಕ್ಷಣದ ಜೊತೆಗೆ ಜನರಿಗೆ ಜ್ಞಾನದಾಸೋಹವನ್ನೂ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ ಮಾತನಾಡಿ, ನಮ್ಮ ಸಾಧು, ಸಂತರು ಪೂಜೆ, ಪುನಸ್ಕಾರಗಳ ಜೊತೆ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡದೇ ಹೋಗಿದ್ದರೆ ನಾವು ನಿರಕ್ಷರಿಗಳಾಗಿ ಉಳಿಯಬೇಕಿತ್ತು. ಬಿಎಲ್ಡಿಇ ಸಂಸ್ಥೆ ಸಂಸ್ಥಾಪಕರ ದೂರದೃಷ್ಠಿಯ ಫಲವಾಗಿ ಇಂದು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದೆ. ಡಾ. ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಬಿ.ಎಂ. ಪಾಟೀಲ ಅವರು ಕಟ್ಟಿ ಬೆಳೆಸಿರುವ ಈ ಸಂಸ್ಥೆಯನ್ನು ಹಾಲಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಇಂದಿನ ಉದಾರೀಕರಣ, ಜಾಗತೀಕರಣ, ಖಾಸಗೀಕರಣದ ಅಗತ್ಯಕ್ಕೆ ಅನುಗುಣವಾಗಿ ಹೆಮ್ಮರವಾಗಿ ಬೆಳೆಸಿದ್ದಾರೆ. ವಿಜಯಪುರದ ಜೊತೆ ಮತ್ತು ಜಮಖಂಡಿಯಲ್ಲಿಯೂ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿರುವ ಎಲ್ಲ ಅರ್ಹತೆ ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.

    ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಮಾತನಾಡಿ, ಬಿಎಲ್ಡಿಇ ಸಂಸ್ಥೆ ಸಾಮಾನ್ಯರಿಗೆ ಶಿಕ್ಷಣ ನೀಡಿ ಜಾಣರನ್ನಾಗಿ ಮಾಡುವ ಕಾಯಕದಲ್ಲಿ ನಿರತವಾಗುವ ಮೂಲಕ ಸಂಸ್ಥಾಪಕರ ಕನಸನ್ನು ನನಸು ಮಾಡುತ್ತಿದೆ. ಇಲ್ಲಿ ಬೋಧನೆ ಮಾಡಿದ ಶಿಕ್ಷಕರು ಮತ್ತು ಕಲಿತ ವಿದ್ಯಾರ್ಥಿಗಳ ಆದರ್ಶಗಳಿಂದ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.

    2022-23ನೇ ಶೈಕ್ಷಣಿಕ ವರ್ಷದಲ್ಲಿ ಸಂಶೋಧನೆ ಮಾಡಿದ 59 ನಾನಾ ಪ್ರಾಧ್ಯಾಪಕರು ಹಾಗೂ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.

    ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ. ಕೊಟ್ನಾಳ, ಆಡಳಿತಾಧಿಕಾರಿ ಪ್ರೊ.ಬಿ.ಆರ್. ಪಾಟೀಲ, ಪ್ರೊ.ಎ.ಎಸ್. ಕಾಳಪ್ಪನವರ, ಪ್ರೊ.ಎಸ್.ಎಚ್. ಲಗಳಿ, ಕ್ರೀಡಾ ನಿರ್ದೇಶಕ ಪ್ರೊ.ಎಸ್.ಎಸ್. ಕೋರಿ, ಬಿಎಲ್‌ಡಿಇ ಡೀಮ್ಡ್ ವಿವಿ ಕುಲಸಚಿವ ಡಾ.ಆರ್.ವಿ. ಕುಲಕರ್ಣಿ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಡಾ. ಕುಶಾಲದಾಸ, ಪ್ರೊ. ಬಿ. ಎಂ. ನುಚ್ಚಿ, ವಿಶ್ರಾಂತ ಪ್ರಾಚಾರ್ಯ ಎಸ್.ಜಿ. ತಾಳಿಕೋಟಿ, ಎಂ.ಎಸ್. ಝಳಕಿ, ಎ.ಎಸ್. ಬಗಲಿ, ಡಾ. ವೈ.ಬಿ. ಪಟ್ಟಣಶೆಟ್ಟಿ, ಡಾ. ವಿ.ಡಿ. ಐಹೊಳ್ಳಿ ಮತ್ತಿತರರಿದ್ದರು.

    ಡಾ. ಎಂ.ಎಸ್. ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತುರಾಜ ಮಾದನಭಾವಿ ಪ್ರಾರ್ಥಿಸಿದರು. ಕವಿತಾ ಹೆಗಡೆ, ದೀಪ್ತಿ ಭಟ್ ವಚನ ಸಂಗೀತ ಹಾಡಿದರು. ಲಕ್ಷ್ಮಿ ಹಳಕಟ್ಟಿ, ಜ್ಯೋತಿ ಬಿರಾದಾರ ಹಾಗೂ ಸಂಗಡಿಗರು ಸಂಸ್ಥೆಯ ಗೀತೆ ಹಾಡಿದರು. ಪ್ರಾಚಾರ್ಯ ಪ್ರೊ.ಬಿ.ಎಸ್. ಬೆಳಗಲಿ ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ರಶ್ಮಿ ಪಾಟೀಲ ಮತ್ತು ಪ್ರೊ. ದಾನಮ್ಮಾ ಗಿಡವೀರ ನಿರೂಪಿಸಿದರು. ಡಾ. ಭಾರತಿ ಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts