ರಾಮನಗರ: ‘ಪಟ್ಟದ ಆನೆ ಅಂಬಾರಿ ಹೊರಬೇಕು, ಮರಿಯಾನೆ ಹೊರಲು ಸಾಧ್ಯವಿಲ್ಲ’ ಎಂದಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ತಿರುಗೇಟು ಕೊಟ್ಟಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ, ಸಿ.ಪಿ. ಯೋಗೇಶ್ವರ್ ವ್ಯಂಗ್ಯವಾಡಿದ್ದರು. ಅದಕ್ಕೆ ಪ್ರತಿಯಾಗಿ ಯೋಗೇಶ್ವರ್ಗೆ ನಿಖಿಲ್ ಅವರದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ‘ಮೊದಲು ಮರಿಯಾನೆಯನ್ನು ಯೋಗೇಶ್ವರ್ ಜೀರ್ಣಿಸಿಕೊಳ್ಳಲಿ, ಆಮೇಲೆ ಪಟ್ಟದ ಆನೆಯ ಮುಂದೆ ಹೋಗಲಿ’ ಎಂದು ಸವಾಲು ಎಸೆದಿದ್ದಾರೆ.
ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ನಾವು ಜನರ ಕಷ್ಟ ಕೇಳಲು ಬರುತ್ತೇವೆ. ಹೀಗೆ ಬರುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಚುನಾವಣೆ ಸಂದರ್ಭ ಅಂತ ಮಾತ್ರ ನಾನು ಬಂದಿಲ್ಲ, ಬೇಕಾದರೆ ಅವರೂ ಬಂದು ಹೋಗಲಿ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರ ಮಾದರಿ ತಾಲೂಕು ಆಗಲಿದೆ, ಸಿ.ಪಿ.ಯೋಗೇಶ್ವರ್ ಕಾದು ನೋಡಲಿ ಎಂದು ನಿಖಿಲ್ ಹೇಳಿದರು.
ಚನ್ನಪಟ್ಟಣದ ವಿವಿಧ ಗ್ರಾಮಗಳಿಗೆ ನಿಖಿಲ್ ಕುಮಾರಸ್ವಾಮಿ ತೆರಳುತ್ತಿದ್ದಾರೆ. ಇಂದು ಕನಕಪುರ ತಾಲೂಕಿನ ಮರಳವಾಡಿಯ ಸುಂಡಗಟ್ಟ ಗ್ರಾಮಕ್ಕೂ ಭೇಟಿ ನೀಡಿದರು. ಅರಣ್ಯ ಇಲಾಖೆಯ ವಾಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಂಡಗಟ್ಟದ ಹೊಳಸಾಲಯ್ಯ ಆನೆ ದಾಳಿಯಿಂದ ಮೃತಪಟ್ಟಿದ್ದರು. ಅವರ ಮನೆಗೆ ಭೇಟಿ ನೀಡಿದ ನಿಖಿಲ್, ಮೃತಪಟ್ಟ ವಾಚರ್ ಹೊಳಸಾಲಯ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.