ರಿಪ್ಪನ್ಪೇಟೆ: ಸಮೀಪದ ಸೂಡೂರು ಅರಣ್ಯ ಪ್ರದೇಶದಲ್ಲಿ ಶಿವಮೊಗ್ಗದ ಜೆಎನ್ಎನ್ಸಿಇ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಶವ ನೇಣುಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಹಾರೋಹಿತ್ತಲು ಗ್ರಾಮದ ಯೋಗೇಂದ್ರ ಎಂಬುವರ ಪುತ್ರ ಅರುಣ್ಕುಮಾರ್ (18) ಮೃತ ವಿದ್ಯಾರ್ಥಿ. ಶಿವಮೊಗ್ಗದಲ್ಲಿ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಯಾಗಿ 2ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಶಿವಮೊಗ್ಗದ ಟ್ಯಾಂಕ್ವೊಹಲ್ಲಾದಲ್ಲಿರುವ ಯಲ್ಲಮ್ಮ ದಾಸಪ್ಪ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಹೂಡಿದ್ದನು. ಮನೆಯವರು ದೂರವಾಣಿ ಕರೆ ಮಾಡಿದರೂ ಉತ್ತರಿಸದ ಅರುಣ್ಕುಮಾರ್, ಕಾಲೇಜಿಗೂ ಬಂದಿರಲಿಲ್ಲ. ಈ ಬಗ್ಗೆ ಹಾಸ್ಟೆಲ್ನಲ್ಲಿ ವಿಚಾರಿಸಿದಾಗ ಆತ ಹಾಸ್ಟೆಲ್ಗೂ ಎರಡು ದಿನಗಳಿಂದ ಬಂದಿರಲಿಲ್ಲ ಎಂಬ ಮಾಹಿತಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಕೊಲೆ ಶಂಕೆ ವ್ಯಕ್ತಪಡಿಸಿ ಶಿವಮೊಗ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮೊಬೈಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಶೆಟ್ಟಿಕೆರೆ-ಬಸವಾಪುರ ನಡುವಿನ ಸೂಡೂರು ಅರಣ್ಯ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.