ಭರತ್ ಶೆಟ್ಟಿಗಾರ್ ಮಂಗಳೂರು
ನಗರದ ವಿವಿಧೆಡೆ ಬೇಸಿಗೆಯಲ್ಲಿ ಆರಂಭಗೊಂಡಿದ್ದ ಫುಟ್ಪಾತ್, ಚರಂಡಿ ಕಾಮಗಾರಿಗಳು ಮಳೆಗಾಲ ಶುರುವಾದರೂ ಪೂರ್ಣಗೊಂಡಿಲ್ಲ. ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಮತ್ತಷ್ಟು ಬಿರುಸು ಪಡೆಯಲಿದೆ. ಈ ಅವಧಿಯಲ್ಲಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗದೆ ಗುತ್ತಿಗೆದಾರರು ಕೆಲಸ ನಿಲ್ಲಿಸಬೇಕಾಗುತ್ತದೆ. ಹೀಗೆ ಅರ್ಧದಲ್ಲಿ ನಿಲ್ಲಿಸಿದರೆ ಅಪಾಯವೇ ಹೆಚ್ಚು. ಫುಟ್ಪಾತ್ಗಳು ಇಲ್ಲದಿರುವುದರಿಂದ ಜನರು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದ್ದು, ಇದರಿಂದ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಕಾಂಕ್ರೀಟ್ ಕಾಮಗಾರಿಗಾಗಿ ಅಳವಡಿಸಿದ ಕಬ್ಬಿಣದ ಕಂಬಿಗಳನ್ನು ಹಾಗೆಯೇ ಬಿಟ್ಟು ಹೋಗುವುದರಿಂದಲೂ ಆಪಾಯವಿದೆ. ನಗರದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಿಸಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಎಲ್ಲೆಲ್ಲ ಕಾಮಗಾರಿ: ಪಿವಿಎಸ್ ವೃತ್ತದ ಬಳಿ ಕಳೆದೆರಡು ವಾರದಿಂದ ಚರಂಡಿ ಮತ್ತು ಫುಟ್ಪಾತ್ ಕಾಮಗಾರಿ ನಡೆಯುತ್ತಿದ್ದು, ಮಳೆ ಆರಂಭವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಣ್ಣಗುಡ್ಡೆ, ಬಳ್ಳಾಲ್ಭಾಗ್ ಬಳಿ, ಜೈಲು ರಸ್ತೆಯ ಕೊಡಿಯಾಲ್ ಗುತ್ತು ಕ್ರಾಸ್, ಪಂಪ್ವೆಲ್ನಿಂದ ಕಂಕನಾಡಿ ರಸ್ತೆ, ಕದ್ರಿ ಕಂಬಳ ರಸ್ತೆ ಸೇರಿದಂತೆ ವಿವಿಧೆಡೆ ಕಾಮಗಾರಿ ನಡೆಯುತ್ತಿದೆ.
ಕಾಮಗಾರಿ ಬೇಸಿಗೆಯಲ್ಲೇ ಆರಂಭವಾಗಿತ್ತು. ಕರೊನಾ ಹಿನ್ನೆಲೆ ಕಾರ್ಮಿಕರು ಊರಿಗೆ ತೆರಳಿದ ಕಾರಣ ಸಲ್ಪ ವಿಳಂಬವಾಗಿದೆ. ಎಲ್ಲ ಕಾಮಗಾರಿಗಳು ಶೀಘ್ರ ಮುಗಿಯಲಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪಾಲಿಕೆ ಆಯುಕ್ತ