ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಪಡೆದ ನವಯುಗ ಕಂಪನಿ ಮಾಲೀಕರ ಮೇಲೆ ಐಟಿ ರೈಡ್ ನಂತರ ಹೆದ್ದಾರಿ ವಿಸ್ತರಣೆ ಸ್ಥಗಿತಗೊಂಡಿದ್ದು, ಅದರಲ್ಲಿ ಸರ್ವೀಸ್ ರಸ್ತೆ, ಅಂಡರ್ಪಾಸ್, ಫ್ಲೈ ಓವರ್ ಕಾಮಗಾರಿ ನಿಂತೇ ಹೋಗಿತ್ತು.
ಅಧಿಕಾರಿಗಳ ಎಚ್ಚರಿಕೆ, ಜನಪ್ರತಿನಿಧಿಗಳ ಆಗ್ರಹ, ನಾಗರಿಕರ ಹೋರಾಟ ನಂತರ ಕಾಮಗಾರಿ ಒಂದಿಷ್ಟು ವೇಗ ಪಡೆದರೂ ಕರೊನಾ ಲಾಕ್ಡೌನ್ಗೆ ಕಾಮಗಾರಿ ಮತ್ತೆ ಸ್ಥಗಿತಗೊಂಡಿತ್ತು. ಆದರೆ ಈಗ ಅಂಡರ್ ಪಾಸ್ ಓಡಾಟ ಕನಸಿಗೆ ಮತ್ತೆ ಬಣ್ಣ ಬಂದಿದೆ.
ಫ್ಲೈ ಓವರ್ ಕಾಮಗಾರಿ ಒಂದು ಕಡೆ ಮುಗಿದು, ಡಾಂಬರು ಕೆಲಸ ಪೂರ್ಣಗೊಂಡು ಮತ್ತೊಂದೆಡೆ ನಡೆಯುತ್ತಿದೆ. ಫ್ಲೈ ಓವರ್ ಮೇಲೆ ಓಡಾಡಬೇಕು ಎನ್ನುವ ಕನಸು ನನಸಾಗುವ ಹಂತಕ್ಕೆ ಬಂದು ನಿಂತಿದೆ.
ಕಳೆದ ಹತ್ತು ವರ್ಷದಿಂದ ಕುಂದಾಪುರ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಫ್ಲೈ ಓವರ್, ಬಸ್ರೂರು ಮುರುಕೈ ಬಳಿ ಅಂಡರ್ ಪಾಸ್ ಪೂರ್ಣಗೊಳಿಸುವಂತೆ ಜನತೆ ಪ್ರತಿಭಟನೆ ನಡೆಸಿದ್ದರು.
ಹೆದ್ದಾರಿ ಗುತ್ತಿಗೆ ಪಡೆದ ಕಂಪನಿ ಇಂಜಿನಿಯರ್ಗೆ ಆದಷ್ಟು ಬೇಗ ಕಾಮಗಾರಿ ಮುಗಿದು ಸಂಚಾರಕ್ಕೆ ಬಿಟ್ಟುಕೊಡುವಂತೆ ಉಡುಪಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಮಗಾರಿಗೆ ತಡೆಯಾಗಿತ್ತು. ಪ್ರಸಕ್ತ ಕಾಮಗಾರಿಗೆ ವೇಗ ಸಿಕ್ಕಿದೆ. ಇನ್ನೂ ತುಂಬಾ ಕೆಲಸ ಬಾಕಿ ಇರುವುದರಿಂದ ಇನ್ನೆರಡು ಮೂರು ತಿಂಗಳಲ್ಲಿ ಸಂಚಾರ ಮುಕ್ತವಾಗುವ ನಿರೀಕ್ಷೆಯಿದೆ.
-ಕೆ.ರಾಜು ಉಪವಿಭಾಗಾಧಿಕಾರಿ, ಕುಂದಾಪುರಲಾಕ್ಡೌನ್ ಆಗದಿದ್ದರೆ ಇಷ್ಟೊತ್ತಿಗೆ ಫ್ಲೈ ಓವರ್ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗುತ್ತಿತ್ತು. ಈಗ ಕಾಮಗಾರಿ ಅಂತಿಮ ಘಟ್ಟಕ್ಕೆ ಬಂದಿದೆ. ಈ ಬಗ್ಗೆ ಸಂಸದರ ಗಮನಕ್ಕೆ ತಂದಿದ್ದು, ಮಳೆಗಾಲದಲ್ಲಿ ನೀರು ಸರಾಗ ಹೋಗುವಂತೆ ಮಾಡಿ, ರಸ್ತೆ ಹಾಗೂ ಫ್ಲೈ ಓವರ್ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ವಿನಂತಿಸಲಾಗಿದೆ. ಮಳೆಗಾಲ ಬರುವುದರಿಂದ ಶೀಘ್ರದಲ್ಲಿ ಕೆಲಸ ಮಾಡುವ ಮೂಲಕ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ಬಿಟ್ಟುಕೊಡಬೇಕು.
-ರಾಜೇಶ್ ಕಾವೇರಿ, ಮಾಜಿ ಉಪಾಧ್ಯಕ್ಷ ಪುರಸಭೆ ಕುಂದಾಪುರ