ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದ ಸಿಸಿಬಿ ತನಿಖೆಯಲ್ಲಿ ಬಗೆದಷ್ಟು ಸ್ಫೋಟಕ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಲೇ ಇವೆ.
ವಾಕಿಟಾಕಿ ರಹಸ್ಯ
ಶಂಕಿತರ ಮನೆಯಲ್ಲಿ 4 ಗ್ರೆನೇಡ್ ಸಿಕ್ಕಿರುವುದು ಆತಂಕಕಾರಿ ಸಂಗತಿ. ಆದರೆ, ಅದಕ್ಕಿಂತ ಅಪಾಯಕಾರಿ ಸಂಗತಿ ಏನೆಂದರೆ 4 ವಾಕಿಟಾಕಿ ಪತ್ತೆಯಾಗಿರುವುದು. ಈ 4 ವಾಕಿಟಾಕಿ ಇದ್ದಿದ್ದು ಯಾವುದೇ ಸಂವಹನ ನಡೆಸುವುದಕ್ಕಲ್ಲ ಬದಲಾಗಿ ಬಾಂಬ್ ಆಪರೇಟ್ ಮಾಡುವುದಕ್ಕೆ. ಇದಕ್ಕಾಗಿಯೇ ಚೀನಾ ನಿರ್ಮಿತ 4 ವಾಕಿಟಾಕಿ ಶಂಕಿತರ ಕೈಸೇರಿತ್ತು.
ಬಿಎಂಟಿಸಿ ಬಸ್ ಸ್ಫೋಟಕ್ಕೆ ಪ್ಲ್ಯಾನ್
ವಾಕಿಟಾಕಿಗಳನ್ನು ಶಂಕಿತರು ಟ್ರಿಗರ್ ಆಗಿ ಬದಲಾವಣೆ ಮಾಡಿದ್ದರು. ರಿಮೋಟ್ ರೂಪದಲ್ಲಿ ವಾಕಿಟಾಕಿ ಬಳಕೆಗೆ ಸಂಚು ಮಾಡಿದ್ದರು. ಇದರ ಜೊತೆಗೆ ಬೆಂಗಳೂರಿನಲ್ಲಿ ಬಸ್ಗಳಲ್ಲಿ ಸ್ಫೋಟ ಮಾಡಲು ತಯಾರಿ ನಡೆಸುತ್ತಿದ್ದರು. ಅದರಲ್ಲೂ ಬಿಎಂಟಿಸಿ ಬಸ್ ಸ್ಫೋಟಿಸಲು ಶಂಕಿತರು ಪ್ಲಾನ್ ಮಾಡಿಕೊಂಡಿದ್ದರು. ತಮ್ಮ ಪ್ಲಾನ್ ಸಣ್ಣದಾದ್ರೂ ದೊಡ್ಡ ಪರಿಣಾಮ ಬೀರುವಂತೆ ಸಂಚು ಮಾಡಿದ್ದರು. ಗ್ರೆನೇಡ್ಗಳನ್ನು ಆಪರೇಟ್ ಮಾಡಲು ವಾಕಿಟಾಕಿಗೆ ಟ್ರಿಗರ್ ಮಾಡಿದ್ದರು ಎಂಬ ಬೆಚ್ಚಿ ಬೀಳಿಸುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಶಸ್ತ್ರಾಸ್ತ್ರಗಳ ಶೇಖರಣೆಗೆ ಪ್ಲ್ಯಾನ್
ಶಂಕಿತ ಉಗ್ರರು ಕರ್ನಾಟಕ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಶೇಖರಣೆಗೆ ಪ್ಲ್ಯಾನ್ ಮಾಡಿಕೊಂಡಿದ್ದರು. ಓರ್ವ ಶಂಕಿತನ ಮನೆಯಲ್ಲಿ ಶಸ್ತ್ರಾಸ್ತ್ರಗಳ ಶೇಖರಣೆಗೆ ನಿರ್ಧಾರ ಮಾಡಿದ್ದರು. ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದ ಶಸ್ತ್ರಾಸ್ತ್ರಗಳ ಜೊತೆಗೆ ಬಾಂಬ್ಗಳನ್ನೂ ಶೇಖರಿಸಿ ಇಡುತ್ತಿದ್ದರು. ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆಯಾಗುವಷ್ಟು ಬಾಂಬ್ ಶೇಖರಿಸುತ್ತಿದ್ದರು. ಉಗ್ರರ ಸಂಚು ಬಯಲಾದ ಕೂಡಲೇ ಐವರು ಶಂಕಿತ ಉಗ್ರರ ವಿಚಾರಣೆಯನ್ನು ಸಿಸಿಬಿ ತೀವ್ರಗೊಳಿಸಿದೆ. ಎಲ್ಲೆಲ್ಲಿಂದ ಶಸ್ತ್ರಾಸ್ತ್ರಗಳನ್ನ ತರಿಸಿಕೊಳ್ಳುತ್ತಿದ್ದರು ಎಂಬ ಆಯಾಮದಲ್ಲಿ ತನಿಖೆ ಮಾಡುತ್ತಿದೆ.
ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪಿಗಳು
* A1- ಟಿ. ನಜೀರ್, ಸದ್ಯ ಜೈಲಿನಲ್ಲಿದ್ದಾನೆ.
* A2- ಜುನೈದ್, ಪರಾರಿಯಾಗಿದ್ದಾನೆ.
* A3- ಸುಹೇಲ್, ಬಂಧನ
* A4- ಉಮರ್, ಬಂಧನ
* A5- ಜಾಹಿದ್, ಬಂಧನ
* A6- ಮುದಾಸಿರ್, ಬಂಧನ
* A7- ಫೈಜರ್, ಬಂಧನ
ಶಂಕಿತರ ಬಳಿ ಇದ್ದ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸ್ಯಾಟಲೈಟ್ ಫೋನ್ ಹಾಗೂ 4 ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರಿಂದ ಸಂಚು: ಪೊಲೀಸ್ ಆಯುಕ್ತರಿಂದ ಸ್ಫೋಟಕ ಮಾಹಿತಿ ಬಹಿರಂಗ